ADVERTISEMENT

ರೈಲ್ವೆ ಸರ್ವೆ ತ್ವರಿತವಾಗಿ ನಡೆಯಲಿ: ಹಾವೇರಿ– ಶಿರಸಿ ರೈಲ್ವೆ ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 13:23 IST
Last Updated 8 ಜನವರಿ 2020, 13:23 IST

ಶಿರಸಿ: ರೈಲ್ವೆ ಇಲಾಖೆ ಆದೇಶಿಸಿರುವ ಯೋಜಿತ ತಾಳಗುಪ್ಪ–ಹುಬ್ಬಳ್ಳಿ ರೈಲ್ವೆ ಮಾರ್ಗದ ಸರ್ವೆಯನ್ನು ತ್ವರಿತಗತಿಯಲ್ಲಿ ನಡೆಸುವಂತೆ ಸರ್ಕಾರದ ಮೇಲೆ ನಿರಂತರ ಒತ್ತಡ ತರಲಾಗುವುದು ಎಂದು ಹಾವೇರಿ– ಶಿರಸಿ ರೈಲ್ವೆ ಹೋರಾಟ ಸಮಿತಿಯ ಸಂಚಾಲಕ ಡಾ.ಶಿವರಾಮ ಕೆ.ವಿ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರು- ಮುಂಬೈ ಬ್ರಾಡ್‌ಗೇಜ್‌ನ ಮುಖ್ಯ ಮಾರ್ಗಕ್ಕೆ ಶಿರಸಿ– ಹಾವೇರಿ ನಡುವೆ ಸಂಪರ್ಕ ಮಾರ್ಗ (connective route) ನಿರ್ಮಾಣವಾದರೆ, ವಾಣಿಜ್ಯ ವಹಿವಾಟಿನ ಕೇಂದ್ರವಾಗಿರುವ ಶಿರಸಿಯ ಅಭಿವೃದ್ಧಿಗೆ ಇದು ಪೂರಕವಾಗುತ್ತದೆ ಒಂದೂವರೆ ವರ್ಷದ ಹಿಂದೆ ಅಭಿಯಾನ ನಡೆಸಲಾಗಿತ್ತು. ಆದರೆ, ಆ ವರ್ಷ ಕೇಂದ್ರ ಬಜೆಟ್‌ನಲ್ಲಿ ಈ ಮಾರ್ಗ ನಿರ್ಮಾಣಕ್ಕೆ ಅನುದಾನ ದೊರೆತಿರಲಿಲ್ಲ. ಪ್ರಸ್ತುತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನದಿಂದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಮುಂಡಗೋಡ, ಶಿರಸಿ, ಸಿದ್ದಾಪುರ ಮಾರ್ಗವಾಗಿ ಹುಬ್ಬಳ್ಳಿ–ತಾಳಗುಪ್ಪ ಮಾರ್ಗದ ಸರ್ವೆಗೆ ₹ 79 ಲಕ್ಷ ಮಂಜೂರು ಮಾಡಿದ್ದಾರೆ’ ಎಂದರು.

ಶಿರಸಿ–ಹಾವೇರಿ ಮಾರ್ಗಕ್ಕಿಂತ ಪ್ರಸ್ತಾಪಿತ ಹುಬ್ಬಳ್ಳಿ–ತಾಳಗುಪ್ಪ ಮಾರ್ಗ ಹೆಚ್ಚು ಅನುಕೂಲ. ಬೆಂಗಳೂರು, ಮುಂಬೈವರೆಗೂ ಈ ಮಾರ್ಗದಿಂದ ಸಂಪರ್ಕ ಸಾಧಿಸಬಹುದು. ರೈಲ್ವೆ ಆದರೆ ಈ ಭಾಗದ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ವಿಳಂಬವಿಲ್ಲದೇ ಸರ್ವೆ ನಡೆದು, ಯೋಜನೆ ಕಾರ್ಯಾನುಷ್ಠಾನಗೊಳಿಸುವಂತೆ ಸಮಿತಿ ವತಿಯಿಂದ ಮನವಿ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಕೆಂಪು ಕಣಗಿಲೆ ನಾಟಕ ಪ್ರದರ್ಶನ:ರೋಟರಿ ಕ್ಲಬ್ ಹಾಗೂ ಐಎಂಎ ಘಟಕದ ಜಂಟಿ ಸಹಭಾಗಿತ್ವದಲ್ಲಿ ಫೆ.2ರಂದು ನಟ ಮಂಡ್ಯ ರಮೇಶ ನೇತೃತ್ವದ ತಂಡದಿಂದ ‘ಕೆಂಪು ಕಣಗಿಲೆ’ ನಾಟಕ ಪ್ರದರ್ಶನವನ್ನು ಎಂಇಎಸ್ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಕರ್ಮಿ ಡಾ.ಶ್ರೀಪಾದ ಭಟ್ಟ ಈ ನಾಟಕಕ್ಕೆ ನಿರ್ದೇಶಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ಎನ್‌ಐಸಿಯು ಘಟಕದ ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದ್ದು, ₹ 37 ಲಕ್ಷದ ಯೋಜನೆ ರೂಪಿಸಲಾಗಿದೆ. ಇದಕ್ಕೆ ಧನ ಸಂಗ್ರಹಕ್ಕಾಗಿ ಈ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷರೂ ಆಗಿರುವ ಡಾ.ಶಿವರಾಮ ಕೆ.ವಿ ಹೇಳಿದರು. ವಿ.ಪಿ.ಹೆಗಡೆ ವೈಶಾಲಿ, ಶ್ರೀನಿವಾಸ ಹೆಬ್ಬಾರ, ಡಾ.ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.