ADVERTISEMENT

ಉತ್ತರ ಕನ್ನಡ: ಅಡಿಕೆ ಬೆಳೆಗಾರರಿಂದ ಗರಿಷ್ಠ ವಿಮೆ

ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ 50 ಸಾವಿರ ರೈತರ ನೋಂದಣಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:45 IST
Last Updated 24 ಆಗಸ್ಟ್ 2025, 5:45 IST
ಅಡಿಕೆ ತೋಟ (ಪ್ರಾತಿನಿಧಿಕ)
ಅಡಿಕೆ ತೋಟ (ಪ್ರಾತಿನಿಧಿಕ)   

ಶಿರಸಿ: ತೋಟಗಾರಿಕಾ ಇಲಾಖೆ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಬೆಳೆಗಾರರು ವ್ಯಾಪಕವಾಗಿ ನೋಂದಣಿಯಾಗಿದ್ದರೆ, ಕಾಳುಮೆಣಸು, ಶುಂಠಿ ಬೆಳೆಗಾರರು ವಿಮೆ ಮಾಡಿಸಲು ತೀರಾ ನಿರಾಸಕ್ತಿ ತೋರಿದ್ದಾರೆ. 

ಅಡಿಕೆ, ಕಾಳುಮೆಣಸು, ಮಾವು ಹಾಗೂ ಶುಂಠಿ ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿತ್ತು. ಈವರೆಗೆ ಅಡಿಕೆ ಬೆಳೆಗೆ ಸಂಬಂಧಿಸಿ ಸುಮಾರು 47 ಸಾವಿರ, ಕಾಳುಮೆಣಸು 2.5 ಸಾವಿರ, ಮಾವು 500, ಶುಂಠಿಗೆ ಸಂಬಂಧಿಸಿ 8–10 ರೈತರ ನೋಂದಣಿಯಾಗಿದೆ. 48–50 ಸಾವಿರ ಎಕರೆ ಅಡಿಕೆ, 1 ಸಾವಿರ ಎಕರೆ ಕಾಳುಮೆಣಸು, 500 ಎಕರೆ ಮಾವು ಹಾಗೂ 25–30 ಎಕರೆ ಶುಂಠಿ ಪ್ರದೇಶ ವಿಮೆ ಅಡಿ ಸೇರ್ಪಡೆಗೆ ನೋಂದಾಯಿಸಲಾಗಿದೆ. 

ಕಳೆದ ವರ್ಷಗಳಲ್ಲಿ ವಿಮೆ ಪರಿಹಾರ ಪಡೆದ ಬಹುತೇಕ ಅಡಿಕೆ ಬೆಳೆಗಾರರು ಈ ಬಾರಿಯೂ ನೋಂದಣಿ ಮಾಡಿಸಿದ್ದಾರೆ. ಅಡಿಕೆ ಬೆಳೆಗೆ ಹೆಕ್ಟೇರ್‌ಗೆ ₹1.28 ಲಕ್ಷ ವಿಮೆ ಮೊತ್ತವಿದೆ. ಒಟ್ಟೂ ಮೊತ್ತದ ಶೇ 5ರಷ್ಟು ಅಂದರೆ ₹6,400 ಹಾಗೂ ಕಾಳುಮೆಣಸು ಪ್ರತಿ ಹೆಕ್ಟೇರ್‌ಗೆ ₹47 ಸಾವಿರದಂತೆ ₹2,350, ಶುಂಠಿ ಪ್ರತಿ ಹೆಕ್ಟೇರ್‌ಗೆ ₹1.30 ಲಕ್ಷಕ್ಕೆ ₹6,500 ಪ್ರೀಮಿಯಂ ಮೊತ್ತ ಪಾವತಿಸಿ ರೈತರು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.

ADVERTISEMENT

‘ಬೆಳೆ ಸಾಲ ಪಡೆಯದ ಕೆಲವು ಅಡಿಕೆ ಬೆಳೆಗಾರರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪತ್ರಿಕೆ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆ, ಸ್ವಯಂಘೋಷಣೆ ನಮೂನೆಗಳನ್ನು ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಿದ್ದಾರೆ. ಆದರೆ ಅಡಿಕೆಗೆ ವಿಮೆ ಮಾಡಿಸಿರುವ ಬಹುತೇಕ ರೈತರು ಕಾಳುಮೆಣಸು ಬೆಳೆ ನಿರ್ಲಕ್ಷ್ಯ ಮಾಡಿ ವಿಮೆ ಮಾಡಿಸಿಲ್ಲ. ಜಿಲ್ಲೆಯಲ್ಲಿ ಹೇರಳವಾಗಿ ಶುಂಠಿ ಕ್ಷೇತ್ರವಿದೆ. ಬಹುತೇಕ ಲೀಸ್‌ಗೆ ಕೊಟ್ಟಿರುವುದು, ಅತಿಕ್ರಮಣ ನೆಲದಲ್ಲಿ ಬೇಸಾಯ ಮಾಡುತ್ತಿರುವುದರಿಂದ ವಿಮೆಯಿಂದ ಹೊರಗುಳಿದ ಸಾಧ್ಯತೆ ಇದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ವಿಮೆ ನಷ್ಟ ಪರಿಹಾರವು ಆಧಾರ್ ನಂಬರ್ ಜೋಡಣೆ ಇರುವ ಖಾತೆಯ ಮುಖಾಂತರ ಆಗುವುದರಿಂದ ವಿಮೆ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿ ನೀಡಬೇಕು. ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದ ಕೆಲ ರೈತರು ಯೋಜನೆಯಿಂದ ಹೊರಗುಳಿದಿರುವ ಸಾಧ್ಯತೆಯಿದೆ’ ಎಂದು ಕೆಡಿಸಿಸಿ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದರು.

ಬೆಳೆವಿಮೆ ಯೋಜನೆಯಡಿ ನೋಂದಣಿ ಮಾಹಿತಿ

ತಾಲ್ಲೂಕು; ನೋಂದಣಿಯಾದವರ ಸಂಖ್ಯೆ

ಶಿರಸಿ; 18,738

ಸಿದ್ದಾಪುರ; 10,544

ಯಲ್ಲಾಪುರ; 7,304

ಹೊನ್ನಾವರ; 4,324

ಮುಂಡಗೋಡ; 3,278

ಅಂಕೋಲಾ; 2,120

ಹಳಿಯಾಳ; 325

ಜೊಯಿಡಾ; 864

ಭಟ್ಕಳ; 875

ಕುಮಟಾ; 1,295

ದಾಂಡೇಲಿ; 9

ಕಳೆದ ವರ್ಷ ನೋಂದಣಿಯಾಗಿದ್ದ ಬಹುತೇಕ ರೈತರು ಈ ಬಾರಿಯೂ ನೋಂದಣಿಯಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಿದೆ.
– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.