ದಾಂಡೇಲಿ: ನಗರದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ ಸುತಾರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್ಗೆ ತಲಾ ಹತ್ತು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಿದೆ.
2021ರ ಜೂನ್ 11 ರಂದು ರಾತ್ರಿ ಅಂಕುಶ ಕೊಲೆಗೆ ಯತ್ನ ನಡೆದಿತ್ತು. ಅಂಕುಶ ಪತ್ನಿ, ಗಣೇಶ ಪಾಟೀಲ್ಗೆ ₹30 ಸಾವಿರ ನೀಡುವುದಾಗಿ ಹೇಳಿ ಪತಿಯ ಕೊಲೆಗೆ ಸುಪಾರಿ ನೀಡಿದ್ದಳು.
ಗಣೇಶ ಹಾಗೂ ಮತ್ತೊಬ್ಬ ಬಾಲಾಪರಾಧಿ ಸೇರಿ ಅಂಕುಶ ಸುತಾರ ಮನೆಯನ್ನು ಹಿಂಬಾಗಿಲಿನಿಂದ ಪ್ರವೇಶಿಸಿ, ಅಂಕುಶ ಹತ್ಯಗೆ ಪ್ರಯತ್ನಿಸಿದ್ದರು. ಆಗ ಎಚ್ಚರಗೊಂಡಿದ್ದ ಅಂಕುಶ, ಗಣೇಶನನ್ನು ತಳ್ಳಿ ಕೂಗಿಕೊಂಡಿದ್ದ. ಆಗ ಗಣೇಶ ಪರಾರಿಯಾಗಿದ್ದ. ಆರೋಪಿಗಳನ್ನು ನಾಕಾ ಬಂದಿ ಮಾಡಿ ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು.
ಸುದೀರ್ಘ ವಿಚಾರಣೆ ನಂತರ ಆರೋಪ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಮೊದಲ ಆರೋಪಿ ಗಣೇಶ ಪಾಟೀಲ ಹಾಗೂ ತೇಜಸ್ವಿನಿಗೆ ಹತ್ತು ವರ್ಷ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಕಿರಣ್ ಕಿಣಿ ತೀರ್ಪು ಪ್ರಕಟಿಸಿದ್ದಾರೆ.
ದಾಂಡೇಲಿ ಪಿಎಸ್ಐ ಗಡ್ಡೇಕರ ಪ್ರಕರಣ ದಾಖಲಿಸಿ, ತನಿಖೆ ಮಾಡಿದ್ದರು. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ.ಮಳಗೀಕರ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.