ಶಿರಸಿ: ‘ಪಾರಂಪರಿಕ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುವ ಜತೆಗೆ ಸಾವಯವ ಕೃಷಿಗೂ ಮಹತ್ವ ನೀಡಬೇಕು. ಇದರಿಂದ ಮಣ್ಣಿನ ಆರೋಗ್ಯ ವೃದ್ಧಿಸುತ್ತದೆ’ ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಟಿಎಸ್ಎಸ್ ಸೊಸೈಟಿ ಸಭಾಂಗಣದಲ್ಲಿ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಟಿಎಸ್ಎಸ್, ಟಿಎಂಎಸ್ ಶಿರಸಿ, ಸೊಂದಾದ ಗ್ರಾಮಾಭ್ಯುದಯ ಮತ್ತು ಜಾಗೃತ ವೇದಿಕೆ ಸಹಯೋಗದಲ್ಲಿ ಮಂಗಳವಾರ ನಡೆದ ಅಡಿಕೆ ಎಲೆ ಚುಕ್ಕೆ ರೋಗದ ನಿರ್ಮೂಲನೆ ಕುರಿತ ಚಿಂತನಾ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಪೋಷಕಾಂಶಗಳ ಕೊರತೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಅವೈಜ್ಞಾನಿಕವಾಗಿ ರಾಸಾಯನಿಕ ಬಳಸುತ್ತಿರುವುದರಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಕುಂಟಿತವಾಗುತ್ತದೆ. ಹಾಗಾಗಿ, ರೈತರು ಮಣ್ಣಿನ ಪೋಷಕಾಂಶ ಕಾಪಾಡಿಕೊಳ್ಳಬೇಕು’ ಎಂದರು.
‘ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ವಿವಿಧ ಸಂಸ್ಥೆಗಳು ಪ್ರಯತ್ನ ಮಾಡಿವೆ. ಎಲ್ಲಾ ಸಂಘ–ಸಂಸ್ಥೆಗಳು ಸೇರಿ ಪ್ರಯತ್ನ ಮುಂದುವರಿಸಬೇಕಿದೆ. ಸಾಮೂಹಿಕವಾಗಿ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗುತ್ತದೆ. ಬೆಟ್ಟ ಬಳಕೆದಾರರ ಸಮಸ್ಯೆ ನಿವಾರಣೆಗೆ ಶಾಸಕರು ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
ಟಿಎಸ್ಎಸ್ ಸಂಸ್ಥೆ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಎಲೆ ಚುಕ್ಕಿ ರೋಗದ ನಿರ್ಮೂಲನೆ ಕುರಿತು ವಿಜ್ಞಾನಿ ರಾಜೇಂದ್ರ ಹೆಗಡೆ, ಪ್ರಾಧ್ಯಾಪಕ ಗಂಗಾಧರ ನಾಯ್ಕ ಮಾಹಿತಿ ನೀಡಿದರು.
ಟಿಎಸ್ಎಸ್ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ , ಟಿ.ಎಂ.ಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ, ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ, ಉದಯ ಹೆಗಡೆ ಕಲ್ಲುಸರಿಗೆ, ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಸುರೇಶ ಹಕ್ಕಿಮನೆ ಇದ್ದರು.
ಬೆಳೆ ರಕ್ಷಿಸಿಕೊಳ್ಳಲು ಸಲಹೆ
‘ಎಲೆ ಚುಕ್ಕೆ ರೋಗ ಇಂದಿಗೂ ಸಹ ನಿಯಂತ್ರಣಕ್ಕೆ ಬರುತ್ತಿಲ್ಲ. ತಜ್ಞರಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಅಧ್ಯಯನ ಅವಶ್ಯಕತೆ ಇದೆ. ರೈತರು ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ ರೋಗದಿಂದ ಬೆಳೆ ರಕ್ಷಿಸಿಕೊಳ್ಳಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ‘ಉಪ ಬೆಳೆಗಳನ್ನು ಬೆಳೆಯಬೇಕು. ಕಾಫಿ ಬೆಳೆ ಬೆಳೆಯುವುದರಿಂದ ಆರ್ಥಿಕವಾಗಿ ಸದೃಢವಾಗಬಹುದು. ಅಡಿಕೆ ತೋಟಗಳಿಗೆ ಕಾಡುಪ್ರಾಣಿಗಳಿಂದ ತೊಂದರೆ ಹೆಚ್ಚುತ್ತಿದೆ. ಅರಣ್ಯ ಇಲಾಖೆಯು ಪಾರಂಪರಿಕ ಅರಣ್ಯ ಬೆಳೆಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.