ಶಿರಸಿ: ಪ್ರತಿವರ್ಷ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಆರಾಧನೆ, ಕುಂಕುಮಾರ್ಚನೆ ನೆರವೇರಿಸಿ ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತಿದ್ದ ಮಹಿಳೆಯರು ಈ ಬಾರಿ ಮನೆಯಲ್ಲೇ ಹಬ್ಬವನ್ನು ಭಕ್ತಿ–ಭಾವದಿಂದ ಆಚರಿಸಿದರು.
ಕೋವಿಡ್ 19 ಕಾರಣಕ್ಕೆ ಸಾಮೂಹಿಕ ಆಚರಣೆ ಬದಲಾಗಿ, ಕುಟುಂಬದ ಮಹಿಳೆಯರೆಲ್ಲ ಸೇರಿ, ದೇವಿಯನ್ನು ಪ್ರತಿಷ್ಠಾಪಿಸಿ, ಕಳಶವಿಟ್ಟು ಪೂಜೆ ಸಲ್ಲಿಸಿದರು.
‘ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯ ಸದಸ್ಯರೆಲ್ಲರ ಆಯುಷ್ಯ, ಆರೋಗ್ಯ, ಸೌಭಾಗ್ಯಕ್ಕಾಗಿ ಪ್ರಾರ್ಥಿಸಿ ಸುಮಂಗಲಿಯರು ಈ ಪೂಜೆ ನಡೆಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ಆರಾಧನೆಗೆ ಹೆಚ್ಚು ಮಹತ್ವ ಬಂದಿದೆ. ಕೆಲವು ಕಡೆಗಳಲ್ಲಿ ಆಡಂಬರವೂ ಆಗುತ್ತಿದೆ. ಆದರೆ, ನಾವು ಇಲ್ಲಿ ಯೋಗಮಂದಿರದಲ್ಲಿ ಸಾಮೂಹಿಕವಾಗಿ 350ಕ್ಕೂ ಹೆಚ್ಚು ಮಹಿಳೆಯರು ಸೇರಿ ಕುಂಕುಮಾರ್ಚನೆ ಮಾಡುತ್ತಿದ್ದೆವು. ಈ ವರ್ಷ ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಪೂಜೆ ನೆರವೇರಿಸಿದ್ದೇವೆ’ ಎಂದು ಸ್ವರ್ಣವಲ್ಲಿ ಮಾತೃಮಂಡಳಿ ಅಧ್ಯಕ್ಷೆ ವೇದಾ ಭಟ್ಟ ಪ್ರತಿಕ್ರಿಯಿಸಿದರು.
‘ಅವಿಭಕ್ತ ಕುಟುಂಬಗಳಲ್ಲಿ ಮನೆಯ ಮಹಿಳೆಯರೆಲ್ಲ ಸೇರಿ ಮಂತ್ರ ಪಠಿಸಿ, ಲಕ್ಷ್ಮಿದೇವಿಯನ್ನು ಆರಾಧಿಸಿದರು. ದೇವರ ಪೀಠದಲ್ಲಿ ಕಳಶವಿಟ್ಟು, ಪೂಜಿಸಿ, ಮಧ್ಯಾಹ್ನ ಮುತ್ತೈದೆಯರನ್ನು ಕರೆದು ಅರಿಸಿನ–ಕುಂಕುಮ ನೀಡಿದರು. ದೇವಿಗೆ ಗೋದಿಹಿಟ್ಟಿನ ಶಿರಾ (ಕೇಸರಿಬಾತ್) ಹೆಚ್ಚು ಶ್ರೇಷ್ಠ. ಹೀಗಾಗಿ, ದೇವಿಗೆ ವಿಶೇಷ ಅಲಂಕಾರ ಮಾಡಿ, ಕಡಲೆಕಾಳು, ಶಿರಾ ನೈವೇದ್ಯ ಮಾಡಲಾಯಿತು’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.