ಶಿರಸಿ: ಗುಡ್ಡಗಾಡು ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಕೇಂದ್ರ ಸರಕಾರದ ಸ್ವಾಯತ್ತ ಸಂಸ್ಥೆ ಆಗಿರುವ ಏಮ್ಸ್ (ಆಲ್ ಇಂಡಿಯಾ ಇನಸ್ಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್) ಸ್ಥಾಪನೆಗೆ ಎಂಟು ಸಂಘಟನೆಗಳನ್ನು ಒಳಗೊಂಡ ನಿಯೋಗ ಮಂಗಳವಾರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್–2 ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.
ಜೀವ ಜಲ ಕಾರ್ಯಪಡೆ, ಗ್ರೀನ್ ವಿಷನ್ ಟ್ರಸ್ಟ್, ಜಿಲ್ಲಾ ಯೋಗ ಫೆಡರೇಷನ್, ವಿದ್ಯಾನಗರ ರುದ್ರ ಭೂಮಿ ಅಭಿವೃದ್ದಿ ಸಮಿತಿ, ಎಂಜಿನಿಯರ್ಸ್ ಅಸೋಸಿಯೇಷನ್, ಕೆನರಾ ಬಾರ್ ಬೆಂಡಿಗ್ ಅಸೋಸಿಯೇಷನ್, ತಾಲ್ಲೂಕು ಗೃಹ ನಿರ್ಮಾಣ ಕಾರ್ಮಿಕರ ಸಂಘ, ಲೀಗಲ್ ಹೆಲ್ಪ್ ಲೈನ್ ಫೌಂಡೇಷನ್ ಸಂಘಟನೆ ನಿಯೋಗದಲ್ಲಿದ್ದವು.
‘ಜಿಲ್ಲೆಯ ವಾಣಿಜ್ಯ ಕೇಂದ್ರ ಎನಿಸಿರುವ ಶಿರಸಿ ತಾಲ್ಲೂಕು ಎರಡು ಲಕ್ಷ ಜನಸಂಖ್ಯೆ ಹೊಂದಿದೆ. ಇಲ್ಲಿನ ಆಸ್ಪತ್ರೆಗಳಿಗೆ ಪಕ್ಕದ ಸಾಗರ, ಹಾನಗಲ್, ಸೊರಬ ಭಾಗದಿಂದಲೂ ರೋಗಿಗಳು ಬರುತ್ತಿದ್ದಾರೆ.ಏಮ್ಸ್ ಸ್ಥಾಪನೆಗೆ ಅನುಕೂಲ ಪ್ರದೇಶವಾಗಿದೆ’ ಎಂದು ನಿಯೋಗದ ನೇತೃತ್ವ ವಹಿಸಿದ್ದ ಕಾಶಿನಾಥ ಮೂಡಿ ಹೇಳಿದರು.
‘ಶಿರಸಿ ಸೇರಿದಂತೆ ಜಿಲ್ಲೆಯ ಎಲ್ಲೂ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಹೆಚ್ಚಿನ ಚಿಕಿತ್ಸೆಗೆ ಹೊರಜಿಲ್ಲೆಗಳಿಗೆ ತೆರಳುವ ಸ್ಥಿತಿ ಇದೆ. ಹೀಗಾಗಿ ಗುಡ್ಡಗಾಡು ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಸುಸಜ್ಜಿತ ಆಸ್ಪತ್ರೆ ಅಗತ್ಯವಿದ್ದು ಈ ಕಾರಣಕ್ಕೆ ಏಮ್ಸ್ ಬೇಕು’ ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹೇಳಿದರು.
ಎಂ.ಎಂ. ಭಟ್ಟ, ನಾಗರಾಜ್ ಭಟ್ಟ, ಜಿ.ಎನ್. ಭಟ್ಟ, ಉದಯ ಶೇಟ್, ಪ್ರಕಾಶ ಸಾಲೇರ, ವೆಂಕಟೇಶ ನಾಯ್ಕ, ಮಹೇಶ ನಾಯ್ಕ, ರಮೇಶ ಭಟ್ಟ, ವಿ.ಎಲ್. ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.