ADVERTISEMENT

‘ಯೋಗ’ದಲ್ಲಿ ಹಳ್ಳಿ ಹುಡುಗನ ಸಾಧನೆ

ಸತತ ಮೂರನೇ ಬಾರಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧನಾದ ಖರ್ವಾ ಗ್ರಾಮದ ಬಾಲಕ

ವಿನಾಯಕ ಬ್ರಹ್ಮೂರು
Published 22 ಅಕ್ಟೋಬರ್ 2019, 11:41 IST
Last Updated 22 ಅಕ್ಟೋಬರ್ 2019, 11:41 IST
ಯೋಗಪಟು ಮಹೇಂದ್ರ ಗೌಡ
ಯೋಗಪಟು ಮಹೇಂದ್ರ ಗೌಡ   

ಕಾರವಾರ: ಗ್ರಾಮೀಣ ಭಾಗದ ಈ ಬಾಲಕ, ಈಗ ಯೋಗಾಸನದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಸಜ್ಜಾಗಿದ್ದಾನೆ. ನಿರಂತರ ಅಭ್ಯಾಸಮಾಡಿದ್ದರ ಫಲವಾಗಿ ಮೂರನೇ ಬಾರಿ ‍ಪೈಪೋಟಿ ನೀಡಲು ಸಿದ್ಧನಾಗಿದ್ದಾನೆ.

ಹೊನ್ನಾವರ ತಾಲ್ಲೂಕಿನ ಖರ್ವಾ ಗ್ರಾಮದ ನಾಥಗೇರಿಯ ಮಹೇಂದ್ರ ಗೌಡ 14 ವರ್ಷ ವಯೋಮಿತಿಯಲ್ಲಿಸ್ಪರ್ಧಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾನೆ. ಈತ ಗಣಪತಿ ಮತ್ತು ಮಹಾಲಕ್ಷ್ಮೀ ದಂಪತಿಯ ಪುತ್ರ ಈತ.

2017ರಲ್ಲಿಛತ್ತೀಸಗಡದಲ್ಲಿ ನಡೆದ ‘ರಿದಮಿಕ್ ಯೋಗಾಸನ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಗಳಿಸುವಲ್ಲಿ ಯಶ ಕಂಡಿದ್ದ. ಕಳೆದ ವರ್ಷಮಹಾರಾಷ್ಟ್ರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಆದರೆ, ಈ ಬಾರಿ ಚಿನ್ನದ ಪದಕಗೆಲ್ಲಲೇಬೇಕುಎಂಬ ಛಲದಿಂದ ಸಿದ್ಧವಾಗುತ್ತಿದ್ದಾನೆ.

ADVERTISEMENT

ಬಡ ಕುಟುಂಬದ ಮಹೇಂದ್ರ ನಾಲ್ಕನೇತರಗತಿಯಿಂದಲೇ ಯೋಗ ಕಲಿಯುವುದಕ್ಕೆ ಶುರು ಮಾಡಿದ್ದ.ಇಲ್ಲಿಯ ರಾಜೇಶ್ವರಿ ಹೆಗಡೆ, ಆತನಿಗೆ ಯೋಗಾಸನದ ಭಂಗಿಗಳನ್ನು ಹೇಳಿಕೊಡುತ್ತಿದ್ದಾರೆ. ನಾಥಗೇರಿ ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಊಟದ ವಿರಾಮದಲ್ಲಿ ಒಂದೂವರೆ ತಾಸು ಹಾಗೂ ಶಾಲೆ ಬಿಟ್ಟ ನಂತರ ಒಂದು ತಾಸು ಯೋಗದ ಅಭ್ಯಾಸದಲ್ಲಿ ನಿರತನಾಗುತ್ತಿದ್ದ.ಕಲಿಕೆಯ ಆಸಕ್ತಿಯಿಂದ ಬಹುಬೇಗ ಯೋಗದಲ್ಲಿ ಹಿಡಿತ ಕಂಡುಕೊಂಡ. ಅದರ ಫಲವೇ ಇಂದು ‘ಹ್ಯಾಟ್ರಿಕ್’ ಸಾಧನೆಗೈಯಲು ಸಾಧ್ಯವಾಗಿದೆ.

ರಾಜ್ಯಮಟ್ಟ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅತ್ಯಂತ ಕಠಿಣ ಆಸನಗಳನ್ನು ಮಾಡಬೇಕಾಗುತ್ತದೆ. ಅದನ್ನು ಕಡಿಮೆ ಎಂದರೂ 10 ಸೆಕೆಂಡುಗಳ ಕಾಲ ಉಸಿರು ಬಿಗಿ ಹಿಡಿದು ಮಾಡಬೇಕು. ಬೆರಳು, ಕೈ, ಕಾಲುಗಳು ಸ್ವಲ್ಪ ಓರೆಕೋರೆಯಾದರೂ ಅಂಕ ಕಡಿತಗೊಳ್ಳುತ್ತದೆ.ಇಷ್ಟೆಲ್ಲಾ ಸವಾಲುಗಳನ್ನು ಎದುರಿಸುವಂತೆ ಈತನಿಗೆ ತರಬೇತಿ ನೀಡಲಾಗಿದೆ.

ಕೊಳಗದ್ದೆಯ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಓದುತ್ತಿರುವ ಬಾಲಕ ಸವ್ಯಸಾಚಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಹಾಡು, ಚಿತ್ರಕಲೆ, ಕ್ರೀಡೆ, ಓಟದ ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿದ್ದಾನೆ.

‘ನನ್ನ ಸಾಧನೆಗಳಿಗೆ ರಾಜೇಶ್ವರಿ ಟೀಚರ್ ಕಾರಣ. ಎಲ್ಲಾ ಖರ್ಚು ವೆಚ್ಚಗಳನ್ನು ಅವರೇ ನೋಡಿಕೊಳ್ಳುತ್ತಿದ್ದಾರೆ. ಈ ಬಾರಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗಳಿಸುವುದು ನನ್ನ ಗುರಿ’ ಎನ್ನುತ್ತಾನೆ ಮಹೇಂದ್ರ ಗೌಡ.

ಸತತಎಂಟುವರ್ಷಗಳ ಸಾಧನೆ: ಮಹೇಂದ್ರನ ಯೋಗಗುರು ರಾಜೇಶ್ವರಿ ಹೆಗಡೆ ಅವರ ವಿದ್ಯಾರ್ಥಿಗಳು ಎಂಟು ವರ್ಷಗಳಿಂದ ಸತತವಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಮಹೇಂದ್ರನ ಸಾಧನೆ ಬಗ್ಗೆ ಇವರು ಕೊಂಡಾಡಿದ್ದಾರೆ.

‘ಒಳ್ಳೆಯ ಪ್ರತಿಭಾವಂತ. ಆದರೆ, ಕಲಿಕೆ ಇಷ್ಟಕ್ಕೇ ಸೀಮಿತವಾಗಿರಬಾರದು. ಬೇರೆ ಕಡೆ ಉತ್ತಮ ತರಬೇತುದಾರರು ಸಿಗದೇ ಎಷ್ಟೋ ಪ್ರತಿಭೆಗಳುಕಮರಿವೆ.ಹಳ್ಳಿ ಭಾಗದ ಪಾಲಕರಿಗೆ ಪದಕ,ಪ್ರಮಾಣಪತ್ರದಮಹತ್ವವೂ ತಿಳಿದಿರುವುದಿಲ್ಲ. ಅವರ ನಿರ್ಲಕ್ಷ್ಯದಿಂದಲೂ ಹಲವುಮಕ್ಕಳು ಯೋಗ ವಂಚಿತರಾಗಿದ್ದಾರೆ. ಈತನ ನಾಲ್ಕು ವರ್ಷಗಳ ಕಠಿಣಾಭ್ಯಾಸವನ್ನು ನಾನು ಗಮನಿಸಿದ್ದೇನೆ. ಸ್ಪರ್ಧಾತ್ಮಕ ಆಸನಗಳಲ್ಲಿ ನಿಪುಣನಾಗಿರುವುದರಿಂದ ಗೆಲುವು ಸಾಧಿಸುವ ವಿಶ್ವಾಸವಿದೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.