ಜೊಯಿಡಾ: ತಾಲ್ಲೂಕಿನ ಚಾಂದವಾಡಿಯಲ್ಲಿ ಈಗಿರುವ ಸೇತುವೆಯ ಮೇಲ್ಭಾಗದಲ್ಲೇನೂತನ ಸೇತುವೆಯನ್ನು ನಿರ್ಮಿಸಬೇಕು. ಕಾನೂನುಬದ್ಧವಾಗಿಯೇ ಕಾಮಗಾರಿ ಹಮ್ಮಿಕೊಳ್ಳಬೇಕು ಎಂದು ನೂರಾರು ಗ್ರಾಮಸ್ಥರು ಗುರುವಾರ ಆಗ್ರಹಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಶರತ್ಚಂದ್ರ ಗುರ್ಜರ್ ನೇತೃತ್ವದಲ್ಲಿ ಈಗಿನ ಸೇತುವೆಯ ಬಳಿ ನೂರಾರು ಗ್ರಾಮಸ್ಥರು ಸೇರಿ ತಮ್ಮಬೇಡಿಕೆಯನ್ನು ವ್ಯಕ್ತಪಡಿಸಿದರು. ಈಗಿರುವ ಸೇತುವೆಮಳೆಗಾಲದಲ್ಲಿ ಸಂಪೂರ್ಣವಾಗಿ ಮುಳಗಡೆಯಾಗುತ್ತದೆ. ಹೊಸ ಸೇತುವೆಯನ್ನು ಅದರಕೆಳಭಾಗದಲ್ಲಿ, ತಗ್ಗು ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತದೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕ್ಯಾಸಲ್ ರಾಕ್ ಭಾಗದ ಸುಮಾರು10 ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.ಸೂಪಾ ಅಣೆಕಟ್ಟಿಗೆ ನೀರನ್ನು ಪೂರೈಸುವ ಪ್ರಮುಖ ನದಿಗಳಲ್ಲಿ ಪಾಂಡ್ರಿ ನದಿಕೂಡ ಒಂದು.ಮಳೆಗಾಲದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದು ಪ್ರತಿವರ್ಷ ಚಾಂದವಾಡಿಯಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗುತ್ತದೆ. ಇದರಿಂದ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತವಾಗುತ್ತದೆ.
ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆಯಾದ ಎತ್ತರಿಸಿದ ಸೇತುವೆಯ ಕಾಮಗಾರಿಗೆರಾಜ್ಯಸರ್ಕಾರ ಎರಡು ವರ್ಷಗಳ ಹಿಂದೆ ಸುಮಾರು ₹ 4 ಕೋಟಿ ಮಂಜೂರು ಮಾಡಿತ್ತು. ಆದರೆ,ತಾಂತ್ರಿಕ ಕಾರಣದಿಂದ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಈ ವರ್ಷ ಹೆಚ್ಚುವರಿ ಅನುದಾನವೂ ಮಂಜೂರಾಗಿದ್ದು, ಒಟ್ಟು ₹ 5.99 ಕೋಟಿಗೆ ಕುಂದಾಪುರ ಮೂಲದ ಡಿಕೋಸ್ತಾಕಂಪನಿಗೆ ಟೆಂಡರ್ ನೀಡಲಾಗಿದೆ.
ಈ ಸಂದರ್ಭದಲ್ಲಿ ಅಸು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಗಾವಡೆ,ಪ್ರಮುಖರಾದದಿಲೀಪ ದೇಸಾಯಿ, ಸಂತೋಷ ರೇಡ್ಕರ್, ಉಮೇಶ ಗಾವಡೆ, ಸಂಜು ಮಿರಾಶಿ, ರಮೇಶ ಗಾವಡೆ, ವಸಂತ ದಳವಿ, ವಿಷ್ಣು ಚೌಧರಿ ಹಾಗೂ ನೂರಾರು ಗ್ರಾಮಸ್ಥರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.