ಶಿರಸಿ: ಭಾರಿ ಮಳೆಗೆ ಭೂಕುಸಿತ, ಮರಬಿದ್ದು ಸಂಚಾರಕ್ಕೆ ಅಡ್ಡಿಯಾಗಿದ್ದ ಮತ್ತಿಘಟ್ಟಾ–ಕಮ್ಮಾಣಿ ರಸ್ತೆಯನ್ನು ಇತ್ತೀಚೆಗೆ ಶ್ರಮದಾನ ನಡೆಸಿ ಗ್ರಾಮಸ್ಥರು ಸಂಚಾರಕ್ಕೆ ತೆರವುಗೊಳಿಸಿದರು.
ಕೆಳಗಿನಕೇರಿ, ಕಮ್ಮಾಣಿ ಭಾಗದ ಹಲವೆಡೆ ಭೂಕುಸಿತ ಸಂಭವಿಸಿದ್ದು ರಸ್ತೆಗೆ ಮಣ್ಣು ಆವರಿಸಿಕೊಂಡಿತ್ತು. ದೊಡ್ಡಗಾತ್ರದ ಮರಗಳು ಬುಡಸಮೇತ ಕಿತ್ತುಬಿದ್ದಿದ್ದವು. ಗ್ರಾಮಸ್ಥರು ಅವೆಲ್ಲವನ್ನೂ ತೆರವುಗೊಳಿಸಿದರು. ಈ ಮೂಲಕ ನೆರೆಪೀಡಿತ ಗ್ರಾಮಗಳಾದ ಹೆಗ್ಗಾರ, ಹಳವಳ್ಳಿ, ಕಮ್ಮಾಣಿ ಭಾಗಕ್ಕೆ ಸಂಪರ್ಕಿಸಲು ಅನುಕೂಲ ಕಲ್ಪಿಸಿದರು.
ಪ್ರಮುಖರಾದ ಗೋಪಾಲಕೃಷ್ಣ ವೈದ್ಯ, ಆನಂದ ವೈದ್ಯ, ಆದರ್ಶ ಭಟ್ಟ, ನಚಿಕೇತ ಹೆಗಡೆ, ಗಿರಿಧರ ಹೆಗಡೆ, ಶ್ರೀಕಾಂತ ಗೌಡ, ಸುಬ್ರಾಯ ಸಿದ್ದಿ, ಪ್ರಭಾಕರ ಗೌಡ, ಪ್ರವೀಣ ಗೌಡ, ರಾಮು ಗೌಡ, ಸುರೇಶ ಗೌಡ, ನಾಗಪತಿ ಹೆಗಡೆ, ರಘುನಂದನ ಮರಾಠಿ, ಮಾದೇವ ಗೌಡ, ಮಂಜುನಾಥ ಗೌಡ, ಗಣಪತಿ ಗೌಡ, ಪುರುಷ ಗೌಡ, ರಾಜು ಹೆಗಡೆ, ಗಪ್ಪು ಗೌಡ, ಮಸ್ಕತ್ತಿ ಕುಟುಂಬದವರು ಸಹಕರಿಸಿದರು.
ಕಳೆದ ವರ್ಷದ ನೆರೆ ಸ್ಥಿತಿಯಲ್ಲೂ ಇದೇ ಮಾರ್ಗ ಸಂಪರ್ಕಕ್ಕೆ ಬಳಕೆಯಾಗಿತ್ತು. ಗುಳ್ಳಾಪುರ ಸೇತುವೆ ಕೊಚ್ಚಿಹೋಗಿದ್ದರಿಂದ ಹೆಗ್ಗಾರ, ಹಳವಳ್ಳಿ ಭಾಗಕ್ಕೆ ಸಂಪರ್ಕಕ್ಕೆ ಮತ್ತಿಘಟ್ಟಾ–ಕಮ್ಮಾಣಿ ರಸ್ತೆ ಆಧಾರವಾಗಿದೆ. ಈ ರಸ್ತೆಯನ್ನು ಸರ್ವಋತು ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.