ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿರ್ವೆಯಲ್ಲಿ ನಾರಾಯಣ ದೇವರ ದರ್ಶನವನ್ನು ಪಡೆಯಲು ಗ್ರಾಮಸ್ಥರು ಭರ್ತಿಯಾಗಿ ಹರಿಯುವ ಹಳ್ಳವನ್ನು ನಡೆದುಕೊಂಡು ದಾಟಬೇಕಿದೆ.
ಗ್ರಾಮಕೇಂದ್ರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಶಿರ್ವೆಯಲ್ಲಿ ಹಾಲಕ್ಕಿ ಒಕ್ಕಲಿಗರು, ಇತರ ಸಮಾಜದವರು ಸೇರಿದಂತೆ 150 ಮನೆಗಳಿವೆ. ಅಂದಾಜು 800 ಜನರಿದ್ದಾರೆ. ಈ ಗ್ರಾಮದವರಿಗೆ ನಾರಾಯಣ ದೇವ ಗ್ರಾಮ ದೇವರು.
‘ಹಳ್ಳಕ್ಕೆ ಬಹಳ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿದೆ. ಆದರೆ, ಅದರಲ್ಲಿ ದ್ವಿಚಕ್ರ ವಾಹನದಲ್ಲೂ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಶಾಲಾ ಕಾಲೇಜು ಸಮಯದಲ್ಲಿ ಹಳ್ಳ ದಾಟಲು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಯಾರಿಗದಾರೂ ಅನಾರೋಗ್ಯವಾದರೆ ಹಳ್ಳ ದಾಟಿ ಬರಲು ತುಂಬ ಕಷ್ಟ ಪಡಬೇಕಾಗುತ್ತದೆ’ ಎಂದು ದೇವಳಮಕ್ಕಿಯ ಯುವ ಮುಖಂಡ ಪ್ರಜ್ವಲ್ ಬಾಬುರಾಯ ಶೇಟ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಭಾರಿ ಮಳೆಯಿಂದ ಶಿರ್ವೆಯ ಹಳ್ಳ ತುಂಬಿ ಹರಿಯುತ್ತಿದೆ. ಈಗ ಹಬ್ಬ ಹರಿದಿನಗಳು ಶುರುವಾಗುತ್ತಿದ್ದು, ಹಳ್ಳ ದಾಟಿ ಹೋಗಿ ದೇವರ ದರ್ಶನವನ್ನು ಪಡೆಯಲು ಬಹಳ ತೊಂದರೆಯಾಗುತ್ತಿದೆ. ಹಿರಿಯರು ಹಾಗೂ ಮಹಿಳೆಯರ ಕೈ ಹಿಡಿದು ಹಳ್ಳ ದಾಟಿಸಬೇಕಾಗುತ್ತದೆ’ ಎಂದು ಗ್ರಾಮಸ್ಥರಾದ ಘನಶ್ಯಾಮ ಗೌಡ, ಸಂತೋಷ ಗುನಗಿ, ಶ್ರೀಪಾದ ಗೌಡ, ರಾಮಾ ಗೌಡ, ತುಕ್ಕು ಗೌಡ ಅಳಲು ತೋಡಿಕೊಂಡಿದ್ದಾರೆ.
ಈ ಹಳ್ಳಕ್ಕೆ ಸಮರ್ಪಕವಾದ ಸೇತುವೆ ನಿರ್ಮಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.