ADVERTISEMENT

ಹಂದಿ ಹಾವಳಿಯಿಂದ ಗ್ರಾಮಸ್ಥರು ಕಂಗಾಲು

ಕುಮಟಾ–ಅಂಕೋಲಾ ಗಡಿಭಾಗದ ಪ್ರದೇಶದಲ್ಲಿ ಹಾವಳಿ: ಪ್ರಾಣಾಪಾಯದಿಂದ ಅಪ್ಪ ಮಗ ಪಾರು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ಹಂದಿ ದಾಳಿಯಿಂದ ಗಾಯಗೊಂಡಿರುವ ಅರ್ಚಕ ರಾಮಕೃಷ್ಣ ಭಟ್ಟ
ಹಂದಿ ದಾಳಿಯಿಂದ ಗಾಯಗೊಂಡಿರುವ ಅರ್ಚಕ ರಾಮಕೃಷ್ಣ ಭಟ್ಟ   

ಕಾರವಾರ: ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ರಹ್ಮೂರುಭಾಗದಲ್ಲಿ ಕಾಡು ಹಂದಿಗಳ ಕಾಟ ಜೋರಾಗಿದೆ. ಈಚೆಗೆ ದ್ವಿಚಕ್ರ ವಾಹನ ಸವಾರರ ಮೇಲೆ ಹಂದಿಗಳುದಾಳಿ ನಡೆಸಿ ಇಬ್ಬರು ಗಾಯಗೊಂಡಿದ್ದಾರೆ.

‘ಬ್ರಹ್ಮೂರು ರಸ್ತೆಯ ಸಂತೆಗದ್ದೆ ಬಸ್ ತಂಗುದಾಣದ ಬಳಿ ಭಾನುವಾರ ಸಂಜೆ ಸಾಗುತ್ತಿದ್ದ ಬೈಕ್‌ಗೆ ಹಂದಿಗಳ ಹಿಂಡುಅಡ್ಡ ಬಂದು ಸವಾರರಿಬ್ಬರೂಬಿದ್ದಿದ್ದಾರೆ. ಇದೇ ವೇಳೆಮರಿಗಳ ಜೊತೆ ಇದ್ದ ದೊಡ್ಡ ಹಂದಿ ದಾಳಿ ಮಾಡಲು ಯತ್ನಿಸಿತ್ತು. ಪ್ರಾಣಭಯಕ್ಕೆ ಹೆದರಿ ಕೂಗಿಗೊಂಡಿದ್ದರಿಂದ ಸಮೀಪದ ನಿವಾಸಿಗಳು ಓಡಿ ಬಂದು ರಕ್ಷಿಸಿದರು’ಎಂದು ಗಾಯಾಳು ರಾಮಕೃಷ್ಣ ಭಟ್ಟ ತಿಳಿಸಿದರು.

ಅವರ ಜೊತೆ ಪುತ್ರ ರವೀಂದ್ರ ಭಟ್ಟ ಕೂಡ ಗಾಯಗೊಂಡಿದ್ದಾರೆ. ‘ನಾನು ಬೆಂಗಳೂರಿನ ಗಿರಿನಗರದ ದೇವಸ್ಥಾನದಲ್ಲಿ ಪ್ರಧಾನ ಅರ್ಚಕನಾಗಿ ಕೆಲಸ ಮಾಡುತ್ತಿದ್ದು, ರಜೆ ಮೇಲೆ ಊರಿಗೆ ಬಂದಿದ್ದೆ. ಮಗನನ್ನು ಬಿಡಲು ಕುಮಟಾಕ್ಕೆ ತೆರಳುವ ವೇಳೆ ಹಂದಿಗಳು ಒಂದೇ ಸಮನೆ ಬೈಕ್‌ಗೆ ಅಡ್ಡ ಬಂದು ಅಪಘಾತವಾಯಿತು. ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ಏಟಾಗಲಿಲ್ಲ. ಆದರೆ, ಕೈಕಾಲುಗಳಿಗೆ ಬಲವಾದ ಪೆಟ್ಟಾಗಿದೆ. ಪ್ರಥಮ ಚಿಕಿತ್ಸೆಗೆ ಸಮೀಪದ ಮಿರ್ಜಾನಿಗೆ ಹೋದೆವು.ಅಲ್ಲಿವೈದ್ಯರೇ ಇಲ್ಲದ ಕಾರಣ ಮತ್ತಷ್ಟು ಸಮಸ್ಯೆಯಾಯಿತು. ಈಗ ಚಿಕಿತ್ಸೆ ತೆಗೆದುಕೊಂಡಿದ್ದೇವೆ. ಸುಧಾರಿಸಿಕೊಳ್ಳಲು ಇನ್ನೂ10 ದಿನ ಬೇಕಾಗಬಹುದು’ ಎಂದು ಅಳಲು ತೋಡಿಕೊಂಡರು.

ADVERTISEMENT

‘ನಾಗೂರು, ಸಂತೆಗದ್ದೆ, ಕಡಕೋಡ, ಬ್ರಹ್ಮೂರು ಭಾಗಗಳು ಕುಗ್ರಾಮಗಳಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಉಪಟಳ ಸಾಮಾನ್ಯ. ಮೊದಲೆಲ್ಲಾ ಭತ್ತದ ಕೊಯ್ಲು ಆರಂಭವಾಗುವ ವೇಳೆ ಹಂದಿಗಳ ಕಾಟ ಜೋರಾಗುತ್ತಿತ್ತು. ಈಚೆಗೆ ಎಲ್ಲ ಕಾಲದಲ್ಲೂ ಇವುಗಳ ಹಾವಳಿ ಹೆಚ್ಚಾಗಿದೆ. ಸಂಜೆಯ ನಂತರ ಮಿರ್ಜಾನಿನಿಂದ ಕಾಡಿನ ಮಧ್ಯೆ ಬ್ರಹ್ಮೂರಿಗೆ ತಲುಪುವುದಕ್ಕೆ ಜನರು ಭಯ ಪಡುತ್ತಿದ್ದಾರೆ. ದಿನೇ ದಿನೇ ಹಂದಿಗಳು ರಸ್ತೆ ಮಧ್ಯೆ ಎದುರಾಗುತ್ತವೆ’ಎನ್ನುತ್ತಾರೆ ಗ್ರಾಮಸ್ಥ ನಾರಾಯಣ ಎಂ. ಹೆಗಡೆ.

‘ದಟ್ಟಾರಣ್ಯದ ನಡುವೆಸಾಗುವ ರಸ್ತೆಯು ಹೆಚ್ಚು ತಿರುವುಗಳಿಂದ ಕೂಡಿದೆ. ಹಾಗಾಗಿ ರಾತ್ರಿ ವೇಳೆ ಹಂದಿಗಳು ರಸ್ತೆ ಮಧ್ಯೆಯೇ ನಿಂತಿದ್ದರೂ ಗಮನಕ್ಕೆ ಬರುವುದಿಲ್ಲ. ತಿಂಗಳಿನ ಹಿಂದೆ ಕಬಗಾಲ ಗ್ರಾಮದ ರಾಮಚಂದ್ರ ಹೆಬ್ಬಾರ್ ಮತ್ತು ಶ್ರೀಧರ್ ಹೆಬ್ಬಾರ್ ಕೂಡ ಇದೇ ರೀತಿ ಹಂದಿ ದಾಳಿಯಿಂದ ಪೆಟ್ಟು ಮಾಡಿಕೊಂಡಿದ್ದರು.ಪ್ರತಿ ದಿನವೂ ಸಂಜೆ ನಂತರ ಇದರ ಹಾವಳಿ ತಪ್ಪಿದ್ದಲ್ಲ‘ ಎನ್ನುತ್ತಾರೆ ಗಣಪತಿ ಆರ್. ಭಟ್ಟ.

23ಕಿ.ಮೀ ದೂರದಲ್ಲಿ ಆಸ್ಪತ್ರೆ:ಕುಮಟಾ ಮತ್ತು ಅಂಕೋಲಾ ತಾಲ್ಲೂಕಿನ ಗಡಿ ಪ್ರದೇಶಗಳನ್ನು ಹಂಚಿಕೊಂಡಿರುವ ನಾಗೂರು, ಬ್ರಹ್ಮೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಈ ಭಾಗದಿಂದ ಸರ್ಕಾರಿ ಆಸ್ಪತ್ರೆಗೆ 23 ಕಿಲೋಮೀಟರ್ ದೂರದಲ್ಲಿರುವ ಕುಮಟಾಕ್ಕೇ ಬರಬೇಕಾಗುತ್ತದೆ. ಹಾಗಾಗಿ ಹೆಚ್ಚುತ್ತಿರುವ ಹಂದಿಗಳ ನಿಯಂತ್ರಣಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಕಬಗಾಲ ಗ್ರಾಮದ ಮುಖಂಡ ಕೃಷ್ಣ ಹೆಬ್ಬಾರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.