ಕುಮಟಾ: ಯಾವುದೇ ಮಹಿಳೆ ಮಾಡಿರುವ ಸಾಧನೆ ಆಕೆಗೆ ಸುಲಭವಾಗಿ ದಕ್ಕಿದ್ದಲ್ಲ. ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಸರಿ ದಾರಿಗೆ ತರುವ ಕಾರ್ಯದಲ್ಲಿ ಮಹಿಳೆಯರು ಹೆಚ್ಚೆಚ್ಚು ತೊಡಗಿಕೊಳ್ಳಬೇಕಾದ ಅಗತ್ಯವಿದೆ ಎಂದು ಕುಮಟಾ ಪೊಲೀಸ್ ಠಾಣೆಯ ಅಪರಾಧ ವಿಭಾಗ ಪಿ.ಎಸ್.ಐ ಪದ್ಮಾ ದೇವಳಿ ಹೇಳಿದರು.
ಪಟ್ಟಣದಲ್ಲಿ ಕಾರವಾರದ ಕಲ್ಪತರು ಸೇವಾ ಟ್ರಸ್ಟ್ ವತಿಯಿಂದ ಜಾಗೃತ ಮಹಿಳೆಯರ ಜಿಲ್ಲಾಮಟ್ಟದ ಸಮಾವೇಶದ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಶಕ್ತಿ ಸಂಚಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಹಾಗೂ ತುಳಸಿ ಗೌಡ ಶಿಕ್ಷಣವಿಲ್ಲದಿದ್ದರೂ ತಮ್ಮ ಮನೋಬಲದಿಂದ ಸಮಾಜ ಗುರುತಿಸುವಂಥ ಸಾಧನೆ ಮಾಡಿದರು. ಪುರಾಣ ಕಾಲದಲ್ಲಿ ಮಹಿಳೆಯರಿಗೆ ಸಹಜವಾಗಿಯೇ ಸ್ಥಾನ-ಮಾನ, ಗೌರವು ಇದ್ದವು. ಆದರೆ ಇಂದಿನ ಆಧುನಿಕ ಯುಗದಲ್ಲಿ ಹೋರಾಟ ಮಾಡಿ ಅವುಗಳನ್ನು ಪಡೆಯಬೇಕಾದ ಸ್ಥಿತಿ ಇದೆ ಎಂದರು.
ಪ್ರಾಧ್ಯಾಪಕಿ ಡಾ.ರೇವತಿ ರಾವ್ ಮಾತನಾಡಿ, ಮೀಸಲಾತಿ ಇದೆ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದೆ ಎನ್ನುವ ಮಹಿಳೆಯರ ಮನೋಭಾವ ಬದಲಾಗಬೇಕು. ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ನಾವೂ ಅರ್ಹ ಪಾಲುದಾರರು ಎಂಬ ದೃಢ ನಂಬಿಕೆ ಅವರಲ್ಲಿ ಇರಬೇಕು. ಬದಲಾದ ಜಗತ್ತಿನಲ್ಲಿ ಸಾಧನೆ ಮಾಡುವ ಪ್ರತಿ ಮಹಿಳೆಗೆ ಕುಟುಂಬ ಸಹಕಾರ ಅಗತ್ಯ ಎಂದರು.
ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಶಿಮೊಗ್ಗಾದ ವೀಣಾ ಸತೀಶ್, ನೃತ್ಯ ಶಿಕ್ಷಕಿ ನಯನಾ ಪ್ರಸನ್ನ ಮಾತನಾಡಿದರು. ಸುಜಾತಾ ಶಾನಭಾಗ ಸ್ವಾಗತಿಸಿದರು. ಡಾ.ಶ್ರೀದೇವಿ ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನು ಕಳಸ, ಡಾ.ಪ್ರೀತಿ ಕುಲಕರ್ಣಿ, ಸ್ವಾತಿ ಬಳಗಂಡಿ, ಜಯಾ ಶಾನಭಾಗ, ಡಾ.ವನಮಾಲಾ ಶಾನಭಾಗ, ಡಾ.ಅಜ್ಞಾ ನಾಯಕ, ಪರಮೇಶ್ವರಿ ಮುಕ್ರಿ, ಜಯಶ್ರೀ ಕಾಮತ್, ವಿನೋದ ಪ್ರಭು, ಹನುಮಂತ ಶಾನಭಾಗ, ಡಾ.ಜಿ.ಜಿ. ಹೆಗಡೆ, ಡಾ.ಸುರೇಶ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.