ಶಿರಸಿ: ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಒಳಗೊಂಡಿರುವ ಮಲೆನಾಡು ಮತ್ತು ಅರೆ ಬಯಲುಸೀಮೆ ಪ್ರದೇಶದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರದಿಂದ ಬಿಡುವಿಲ್ಲದೇ ಮಳೆ ಸುರಿಯುತ್ತಿದೆ.
ಒಂದೇ ಸಮನೆ ಸುರಿದ ಮಳೆಗೆ ಭರ್ತಿಯಾದ ಚಿಗಳ್ಳಿ ಜಲಾಶಯದ ಎಡದಂಡೆ ಕಾಲುವೆಯ ಗೇಟ್ನಿಂದ ನೀರು ಹೊರನುಗ್ಗಿ 25 ಎಕರೆಯಷ್ಟು ಭತ್ತ, ಮೆಕ್ಕೆಜೋಳ ಬೆಳೆಗಳು ಹಾಳಾಗಿವೆ. ಸಮಸ್ಯೆ ಹೇಳಿಕೊಳ್ಳಲು ಶಾಸಕರು ಸಿಗುತ್ತಿಲ್ಲವೆಂದು ಆರೋಪಿಸಿದ ರೈತರು, ಗುರುವಾರ ಸಣ್ಣ ನೀರಾವರಿ ಇಲಾಖೆ ಕಚೇರಿಯೆದುರು ಪ್ರತಿಭಟಿಸಿದರು.
ಶಿವರಾಮ ಹೆಬ್ಬಾರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿದ್ದು, ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಲು ಯಾರೂ ಇಲ್ಲದಂತಾಗಿದೆ.
ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ– ಅನಾವೃಷ್ಟಿಯ ನಡುವೆ ಸಿಲುಕಿರುವ ಬನವಾಸಿ ಹೋಬಳಿಯಲ್ಲಿ ಜೂನ್ ತಿಂಗಳಲ್ಲಿ ಹನಿ ಮಳೆಯೂ ಆಗದ ಕಾರಣ ಬಿತ್ತನೆ ಭೂಮಿ ಖಾಲಿ ಬಿದ್ದಿದೆ. 2,700 ಹೆಕ್ಟೇರ್ ಭತ್ತ ಬಿತ್ತನೆ ಪ್ರದೇಶದಲ್ಲಿ 1,100 ಹೆಕ್ಟೇರ್ನಷ್ಟು ಮಾತ್ರ ಕೂರಿಗೆ ಬಿತ್ತನೆಯಾಗಿದೆ.
ಈಗ ಸತತ ಮಳೆಗೆ, ಇಲ್ಲಿನ ಜೀವನದಿಯಾದ ವರದಾ ತುಂಬಿ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ನದಿಗೆ ಪ್ರವಾಹ ಬಂದು, ಸುತ್ತಲಿನ ಕೃಷಿ ಭೂಮಿಯನ್ನು ಆವರಿಸುತ್ತದೆ. ₹ 44.46 ಕೋಟಿ ವೆಚ್ಚದಲ್ಲಿ ವರದಾ ನದಿಯಿಂದ 34 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಕಳಪೆ ಸಾಮಗ್ರಿ ಬಳಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.