ADVERTISEMENT

ಮಾನವೀಯತೆ ಮೆರೆದ ಯುವಕನಿಗೆ ಸನ್ಮಾನ

ಗಾಯಾಳುವನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ರವಿಪ್ರಕಾಶ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 2:52 IST
Last Updated 5 ಏಪ್ರಿಲ್ 2021, 2:52 IST
ಆಂಧ್ರಪ್ರದೇಶದ ಯುವಕ ರವಿಪ್ರಕಾಶ ಅವರನ್ನು ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗೌರವಿಸಿದರು
ಆಂಧ್ರಪ್ರದೇಶದ ಯುವಕ ರವಿಪ್ರಕಾಶ ಅವರನ್ನು ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗೌರವಿಸಿದರು   

ಅಂಕೋಲಾ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ತನ್ನ ಬೈಕ್ ಮೇಲೆ ಸುಮಾರು 40 ಕಿ.ಮೀ ದೂರದಿಂದ ಕರೆತಂದು ಮಾನವೀಯತೆ ಮೆರೆದ ಯುವಕನನ್ನು ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸನ್ಮಾನಿಸಿ ಗೌರವಿಸಿದರು.

ಶನಿವಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಹೆಬ್ಬುಳ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತಕ್ಕೀಡಾದ ಯುವಕರು ಸಹಾಯಕ್ಕಾಗಿ ಅದೇ ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರಲ್ಲಿ ಮನವಿ ಮಾಡಿದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಬೆಳಗಾವಿಯಿಂದ ಗೋಕರ್ಣಕ್ಕೆ ಇದೇ ಮಾರ್ಗದ ಮೂಲಕ ತೆರಳುತ್ತಿದ್ದ ಆಂಧ್ರಪ್ರದೇಶ ದ ಕರ್ನೂಲ್ ನ ಯುವಕ ರವಿಪ್ರಕಾಶ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕನನ್ನು ಮತ್ತೊಂದು ಯುವಕನ ಸಹಾಯ ಪಡೆದು ತನ್ನ ಬೈಕ್ ಮೇಲೆ ಕೂರಿಸಿಕೊಂಡು ತಾಲೂಕಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ರವಿಪ್ರಕಾಶನ ಸಮಯಪ್ರಜ್ಞೆ ಮೆಚ್ಚಿದ ಅಂಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಗೋಕರ್ಣಕ್ಕೆ ತೆರಳಿ ಆತನನ್ನು ಠಾಣೆಗೆ ಕರೆಸಿಕೊಂಡು ಸನ್ಮಾನಿಸಿದರು.

ಯುವಕ ರವಿಪ್ರಕಾಶ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದು ಮಹಾರಾಷ್ಟ್ರದ ಪುಣೆಯ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕನ್ಸ್ಟ್ರಕ್ಷನ್ ಮ್ಯಾನೇಜ್‌ಮೆಂಟ್‌ ಅಂಡ್ ರೀಸರ್ಚ್ ಕಾಲೇಜಿನಲ್ಲಿ ರಿಯಲ್ ಎಸ್ಟೇಟ್ ಮತ್ತು ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ADVERTISEMENT

ಪುಣೆಯಿಂದ ಹೊರಟು ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳಾದ ಗೋಕರ್ಣ ಮುರುಡೇಶ್ವರ ಉಡುಪಿ ಪಟ್ಟಣವನ್ನು ವೀಕ್ಷಿಸಿ ಬಳ್ಳಾರಿ ಮೂಲಕ ಹುಟ್ಟೂರು ಆಂಧ್ರಪ್ರದೇಶದ ಕರ್ನೂಲಿಗೆ ತೆರಳುವ ಉದ್ದೇಶದಿಂದ ಬಂದಿದ್ದರು. ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಕೃಷ್ಣಾನಂದ ನಾಯಕ ಪಿಎಸ್ಐ ಇಸಿ ಸಂಪತ್ ಪಿಎಸ್ಐ ಪ್ರೇಮನಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ರವಿಪ್ರಕಾಶ ಅವರನ್ನು ಗೌರವಿಸಿ ಶುಭ ಹಾರೈಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.