ADVERTISEMENT

ಪ್ರಜಾವಾಣಿ ವರದಿ ಫಲಶೃತಿ: ಬೆಂಗ್ರೆ ಗೊಂಡರಕೇರಿಗೆ ಜಿ.ಪಂ ಸಿ.ಇ.ಒ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 15:27 IST
Last Updated 25 ಜನವರಿ 2021, 15:27 IST
ಎಂ.ಪ್ರಿಯಾಂಗಾ
ಎಂ.ಪ್ರಿಯಾಂಗಾ   

ಭಟ್ಕಳ: ತಾಲ್ಲೂಕಿನ ಬೆಂಗ್ರೆ ಗೊಂಡರಕೇರಿಯ ಬಂಡ್ ದುರಸ್ತಿ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾಸೋಮವಾರ ಭೇಟಿ ನೀಡಿದರು.

ಕಾಮಗಾರಿ ನಡೆಸದೇ ಬಿಲ್ ಪಾವತಿಸಿದ ಬಗ್ಗೆ ‘ಪ್ರಜಾವಾಣಿ’ಯ ಜ.22ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಅಲ್ಲದೇ ಅಂದು ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಸಭೆಯಲ್ಲಿ ಮಾತನಾಡಿದದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಆಲ್ಬರ್ಟ್ ಡಿಕೊಸ್ತಾ, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪ್ರಿಯಾಂಗಾ ಅವರು ಸಭೆಯಲ್ಲಿ ಆಶ್ವಾಸನೆ ನೀಡಿದ್ದರು. ಅದರಂತೆ ಅವರು ಸ್ಥಳಕ್ಕೆ ಭೇಟಿ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಮಗಾರಿಯ ಸ್ಥಳ ಬದಲಾವಣೆಯಾಗಿಲ್ಲ. ಆದರೆ, ಕಾಮಗಾರಿ ನಡೆಸದೆ ಬಿಲ್ ಪಾವತಿಯಾದ ಬಗ್ಗೆ ತನಿಖೆ ನಡೆಸಬೇಕಿದೆ. ಪರಿಣತರ ತಂಡವು ಇನ್ನೊಮ್ಮೆ ಈ ಸ್ಥಳಕ್ಕೆ ಭೇಟಿ ನೀಡಲಿದೆ. ಎಷ್ಟು ಕಾಮಗಾರಿಗೆ ಬಿಲ್ ಪಾವತಿಯಾಗಿದೆ ಎನ್ನುವುದರ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ತಾಲ್ಲೂಕಿಗೆ ಸಣ್ಣನೀರಾವರಿ ಇಲಾಖೆಯಿಂದ ನೆರೆ ಪರಿಹಾರದಡಿ ₹ 4.5 ಕೋಟಿ ಕಾಮಗಾರಿಗೆ ಅನುಮೋದನೆ ದೊರೆತಿದೆ. ಅದರಲ್ಲಿ ₹ 1.6 ಕೋಟಿ ಕಾಮಗಾರಿಯ ಬಿಲ್ ಪಾವತಿಯಾಗಿದೆ. ಉಳಿದ ಮೊತ್ತದ ಕಾಮಗಾರಿ ಆರಂಭ ಆಗಬೇಕಾಗಿದೆ. ಬಿಲ್ ಪಾವತಿಯಾದ ಕಾಮಗಾರಿಯ ಬಗ್ಗೆ ಪರಿಣತರ ತಂಡ ನೀಡುವ ವರದಿಯನ್ನು ಆಧರಿಸಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.