ADVERTISEMENT

405 ಅಡಿ ಎತ್ತರದ ಧ್ವಜ ಸ್ತಂಭದ ಬಿಡಿಭಾಗಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 11:49 IST
Last Updated 6 ಆಗಸ್ಟ್ 2022, 11:49 IST
   

ಹೊಸಪೇಟೆ (ವಿಜಯನಗರ): ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಾಪಿಸಿಲು ಉದ್ದೇಶಿಸಿರುವ 405 ಅಡಿ ಎತ್ತರದ ಧ್ವಜ ಸ್ತಂಭದ ಬಿಡಿ ಭಾಗಗಳ ಮೆರವಣಿಗೆ ನಗರದಲ್ಲಿ ಶನಿವಾರ ನಡೆಯಿತು.

ಮಹಾರಾಷ್ಟ್ರದ ಪುಣೆಯಿಂದ ಬಿಡಿಭಾಗಗಳನ್ನು ಹೊತ್ತು ತಂದ ಐದು ಲಾರಿಗಳನ್ನು ನಗರ ಹೊರವಲಯದ ನ್ಯಾಷನಲ್‌ ಕಾಲೇಜು ಬಳಿ ಬರಮಾಡಿಕೊಳ್ಳಲಾಯಿತು. ಬಳಿಕ ಪೂಜೆ ನೆರವೇರಿಸಿ ಮೆರವಣಿಗೆ ಮಾಡಲಾಯಿತು.

ನೂರಾರು ಯುವಕರು ಕಾಲ್ನಡಿಗೆ, ಬೈಕಿನಲ್ಲಿ ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು ತುಂತುರು ಮಳೆಯಲ್ಲೇ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ‘ಭಾರತ್‌ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದರು. ನ್ಯಾಷನಲ್ ಕಾಲೇಜಿನಿಂದ ಆರಂಭಗೊಂಡ ಮೆರವಣಿಗೆಯು ಬೈಪಾಸ್ ರಸ್ತೆಯ ಮೂಲಕ ಸಾಯಿಬಾಬಾ ವೃತ್ತ, ನಾಗಪ್ಪನ ಕಟ್ಟೆ, ಸಿದ್ಧಿಪ್ರಿಯ ಕಲ್ಯಾಣ ಮಂಟಪ, ಕಾಲೇಜು ರಸ್ತೆ ಮೂಲಕ ಜಿಲ್ಲಾ ಕ್ರೀಡಾಂಗಣ ತಲುಪಿತು. ಆ. 15ರಂದು ಹೊಸ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಲು ಉದ್ದೇಶಿಸಲಾಗಿದೆ.

ADVERTISEMENT

₹6 ಕೋಟಿ ವೆಚ್ಚದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಟೆಂಡರ್ ಕರೆಯದೇ ಧ್ವಜ ಸ್ತಂಭ ನಿರ್ಮಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಆದರೆ, ಅದನ್ನು ಲೆಕ್ಕಿಸದೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಗರಸಭೆ ಉಪಾಧ್ಯಕ್ಷ ಎಲ್‌.ಎಸ್‌. ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸದಸ್ಯರಾದ ಗುಜ್ಜಲ್ ಹನುಮಂತಪ್ಪ, ರೂಪೇಶ್ ಕುಮಾರ್, ಸರವಣನ್, ಮುಖಂಡರಾದ ಧರ್ಮೇಂದ್ರ ಸಿಂಗ್, ಸಿದ್ಧಾರ್ಥ್ ಸಿಂಗ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.