ಹೊಸಪೇಟೆ (ವಿಜಯನಗರ): ‘ಬರೀ ನೀವೆಲ್ಲ ನೆಗೆಟಿವ್ ಮಾಡ್ತೀರಿ ನಡೀರಪ್ಪ...’
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಅವರು ಸುದ್ದಿ ಮಾಧ್ಯಮದವರನ್ನು ಉದ್ದೇಶಿಸಿ ಈ ರೀತಿ ಹೇಳಿದರು. ಬುಧವಾರ ತಾಲ್ಲೂಕಿನ ಕಮಲಾಪುರದ ಮಯೂರ ಭುವನೇಶ್ವರಿ ಹೋಟೆಲ್ನಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ದರು. ಸಭೆಗೂ ಮುನ್ನ ಸುದ್ದಿಗಾರರು ಅವರನ್ನು ಮಾತನಾಡಿಸಲು ಹೋದಾಗ, ‘ಬೇಡ್ರಪ್ಪ ಬರೀ ನೀವೆಲ್ಲ ನೆಗೆಟಿವ್ ಮಾಡ್ತೀರಿ ನಡೀರಪ್ಪ’ ಎಂದು ಕೈಸನ್ನೆ ಮಾಡಿ ಹೊರಟೇ ಹೋದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು ಹಂಪಿ, ಅಂಜನಾದ್ರಿ ಅಭಿವೃದ್ಧಿ ಕುರಿತು ಮಾತನಾಡಿದರು. ‘ಡಿ.ಕೆ. ಸುರೇಶ ಅವರು ನಿಮ್ಮ ವಿರುದ್ಧ ಮಾಡಿರುವ ಆರೋಪದ ಕುರಿತು ನೀವೇನೂ ಹೇಳುವಿರಿ’ ಎಂದು ಸುದ್ದಿಗಾರರು ಕೇಳಿದಾಗ, ‘ರಾಜಕೀಯ, ಸುರೇಶ ಕುರಿತು ನಾನೇನು ಮಾತನಾಡಲಾರೆ’ ಎಂದು ಹೇಳಿ ನಿರ್ಗಮಿಸಿದರು.
ನಾಯಕತ್ವ ಬದಲಾವಣೆ ಕುರಿತು ಪದೇ ಪದೇ ಹೇಳಿಕೆ ನೀಡುವುದರ ಮೂಲಕ ಸುದ್ದಿಯಲ್ಲಿರುವ ಯೋಗೇಶ್ವರ ಅವರು, ಬುಧವಾರ ಇಲ್ಲಿ ಸುದ್ದಿಗಾರರು ಅದರ ವಿಷಯ ಪ್ರಸ್ತಾಪಿಸುತ್ತಿದ್ದಂತೆ ತಪ್ಪಿಸಿಕೊಳ್ಳಲು ಯತ್ನಿಸಿ, ಪ್ರತಿಕ್ರಿಯಿಸದೇ ಹೊರಟು ಹೋದರು.
ಎರಡು ಪ್ರಾಧಿಕಾರಕ್ಕೆ ಚಿಂತನೆ: ಹಂಪಿ, ಅಂಜನಾದ್ರಿಯು, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ನಡುವೆ ಹಂಚಿ ಹೋಗಿವೆ. ಈಗ ಒಂದೇ ಪ್ರಾಧಿಕಾರ ಇದೆ. ಎರಡೂ ಕಡೆ ಪ್ರತ್ಯೇಕವಾಗಿ ಪ್ರಾಧಿಕಾರ ರಚಿಸಿ, ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬ ಬೇಡಿಕೆ ಇದೆ. ಅದರ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು’ ಎಂದು ಸಚಿವ ಯೋಗೇಶ್ವರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.