ಹೊಸಪೇಟೆ (ವಿಜಯನಗರ): 16ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸಿ.ಗಿರಿಜಾ ಸೋಮಶೇಖರ್ ಬಣ್ಣದಮನೆ ಅವರನ್ನು ಬೆಂಬಲಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಗಿರಿಜಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಬದಲಾಗಿ ಬಿಜೆಪಿಯ ಕಲಂದರ ಅವರ ಪತ್ನಿ ಮುಮ್ತಾಜ್ ಅವರಿಗೆ ‘ಬಿ’ ಫಾರಂ ನೀಡಲಾಗಿತ್ತು. ಬಳಿಕ ಗಿರಿಜಾ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಈ ಕುರಿತು ಪಕ್ಷದ ಕಾರ್ಯಕರ್ತರು ಮುಖಂಡರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್ ಈಗ ಮತ್ತೆ ಅವರನ್ನೇ ಬೆಂಬಲಿಸಲು ಮುಂದಾಗಿದೆ.
ಇದೇ ವಿಷಯವಾಗಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಬಿ.ವಿ. ಶಿವಯೋಗಿ ಹಾಗೂ ಪಕ್ಷದ ವಕ್ತಾರ ಸಿರಾಜ್ ಶೇಕ್ ನಡುವೆ ಜಟಾಪಟಿ ನಡೆದು ಕೈಕೈಮಿಲಾಯಿಸುವ ಹಂತಕ್ಕೆ ಹೋಗಿತ್ತು. ಬಳಿಕ ಶಿವಯೋಗಿ ಕೆಪಿಸಿಸಿಗೆ ದೂರು ಸಲ್ಲಿಸಿದ್ದರು. ಈಗ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ. ಸ್ವತಃ ಆ ಪಕ್ಷದ ಮುಖಂಡರೇ ಒಪ್ಪಿಕೊಂಡಿದ್ದಾರೆ.
‘ನಮ್ಮ ತಪ್ಪಿನಿಂದ ಬಿಜೆಪಿಯ ಮುಮ್ತಾಜ್ ಅವರಿಗೆ ಟಿಕೆಟ್ ಸಿಕ್ಕಿತ್ತು. ಈಗ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಗಿರಿಜಾ ಪರ ಪಕ್ಷವು ಕೆಲಸ ಮಾಡಲಿದೆ’ ಎಂದು ಕಾಂಗ್ರೆಸ್ ಮುಖಂಡ ವೆಂಕಟರಾವ್ ಘೋರ್ಪಡೆ ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಚಾರ:
ಮುಖಂಡರಾದ ವೆಂಕಟರಾವ್ ಘೋರ್ಪಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಕೆ.ಪಿ. ಗುರುನಾಥ, ಚಿದಾನಂದ ಮತ್ತಿತರರು ಬುಧವಾರ ವಾರ್ಡ್ 28ರಲ್ಲಿ ಪಕ್ಷದ ಅಭ್ಯರ್ಥಿ ಎಚ್.ಕೆ. ಮಂಜುನಾಥ ಪರ ಪ್ರಚಾರ ನಡೆಸಿ, ಮತಯಾಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.