ADVERTISEMENT

ಕಲಾ ತಂಡಗಳಿಂದ ಜಾನಪದ ವೈಭವ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 13:21 IST
Last Updated 9 ಏಪ್ರಿಲ್ 2022, 13:21 IST
ಕಲಾ ತಂಡಗಳು
ಕಲಾ ತಂಡಗಳು   

ಹೊಸಪೇಟೆ (ವಿಜಯನಗರ): ರಾಜ್ಯದ ನಾನಾ ಭಾಗಗಳ ಕಲಾ ತಂಡಗಳು ನಾಡಿನ ಜಾನಪದ ವೈಭವವನ್ನು ಶನಿವಾರ ನಗರದಲ್ಲಿ ಪ್ರದರ್ಶಿಸಿದವು.

ಜೋಗತಿ ನೃತ್ಯ, ಮಹಿಳಾ ಡೊಳ್ಳು ಕುಣಿತ, ಹಗಲು ವೇಷ, ಮರಗಾಲು ಕುಣಿತ, ಮಹಿಳಾ ವೀರಗಾಸೆ, ಮಹಿಳಾ ತಮಟೆ, ಗೊರವರ ಕುಣಿತ, ಲಂಬಾಣಿ ನೃತ್ಯ, ಬೂತೇರ ನೃತ್ಯ,ಕರಗ ನೃತ್ಯ, ಕಂಗೀಲು, ಪುರವಂತಿಕೆ, ಕರಡಿ ಮಜಲು, ಬೇಡರ ಕುಣಿತ, ಪೂಜಾ ಕುಣಿತ ಸೇರಿದಂತೆ ಇತರೆ ಕಲಾ ಪ್ರಕಾರಗಳನ್ನು ಕಲಾವಿದರ ಪ್ರದರ್ಶಿಸಿದರು.

ನಗರದ ಮೇನ್‌ ಬಜಾರ್‌ನಿಂದ ಸಿದ್ಧಿಪ್ರಿಯಾ ಕಲ್ಯಾಣ ಮಂಟಪದ ವರೆಗೆ ಸಾಗಿದ ಮೆರವಣಿಗೆಯನ್ನು ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕಣ್ತುಂಬಿಕೊಂಡರು. ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ADVERTISEMENT

ಕರ್ನಾಟಕ ಜಾನಪದ ಅಕಾಡೆಮಿ, ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮಕ್ಕೆ ಸಚಿವ ಆನಂದ್‌ ಸಿಂಗ್‌ ನಗರದ ವಡಕರಾಯ ದೇವಸ್ಥಾನದ ಬಳಿ ಡೊಳ್ಳು ಬಾರಿಸಿ ಚಾಲನೆ ನೀಡಿದರು. ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಇದ್ದರು. ಮೆರವಣಿಗೆಯು ಮೇನ್‌ ಬಜಾರ್‌ನಿಂದ ಮಹಾತ್ಮ ಗಾಂಧಿ ವೃತ್ತ, ಪುಣ್ಯಮೂರ್ತಿ ವೃತ್ತ, ಪುನೀತ್‌ ರಾಜಕುಮಾರ್‌ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಹಾದು ಸಿದ್ಧಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಕೊನೆಗೊಂಡಿತು.

ಭಾನುವಾರ (ಏ.10) ಜಾನಪದ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ, 2021ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.