ಹೊಸಪೇಟೆ(ವಿಜಯನಗರ): ಸಮೀಪದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಮಂಗಳವಾರ ಸಂಜೆ ಶ್ರೀರಂಗ ದತ್ತಿನಿಧಿ ವತಿಯಿಂದ ಮೈಸೂರಿನ ಕವಿತಾ ರಂಗ ತಂಡದವರು ಗಣೇಶ ಅಮೀನಗಡ ಅವರ ಏಕವ್ಯಕ್ತಿ ಪ್ರದರ್ಶನದ `ಕೌದಿ’ ನಾಟಕ ಪ್ರಸ್ತುತಪಡೆಸಿದರು.
ಬಣ್ಣ ಬಣ್ಣದ ಹಲವು ಬಟ್ಟೆಗಳನ್ನು ಕೂಡಿಸಿ ಹೊಲಿದ ರೂಪಕವಾಗಿ ಕೌದಿ ಸಿದ್ಧಗೊಳ್ಳುವ ಬಗೆ ಮತ್ತು ಸರ್ವ ಋತುಗಳಿಗೂ ಗ್ರಾಮೀಣ ಪ್ರದೇಶದ ಜನರ ಮೆಚ್ಚಿನ ಹೊದಿಕೆಯಾಗಿದ ಕೌದಿಯು ನೋಡುಗರ ಮನಸ್ಸನ್ನು ಮುದಗೊಳಿಸಿತು. ಅಲ್ಲದೆ ಆಧುನಿಕ ಕಾಲದಲ್ಲಿ ಹತ್ತಿಬಟ್ಟೆ ಬಳಕೆ ಕಡಿಮೆಯಾಗಿದ್ದರ ಪರಿಣಾಮವಾಗಿ ಕೌದಿಯ ಪ್ರಾಮುಖ್ಯತೆಯು ಇಲ್ಲವಾಗುತ್ತಿದೆ.
ಇದರಿಂದ ಕೌದಿ ತಯಾರಿಸುವವರ ಆರ್ಥಿಕ ಸ್ಥಿತಿಗತಿ ಅಷ್ಟಕಷ್ಟೇ ಇದ್ದು, ಯಾವುದೇ ಹಣಕಾಸಿನ ಸಹಾಯ ದೊರಕದೆ ಆರ್ಥಿಕವಾಗಿ ಕಷ್ಟ ಪಡುವ ಹಾಗೂ ಅವರ ಬದುಕು ಬವಣೆಗಳ ಕುರಿತ ಬೆಳಕು ಚೆಲ್ಲುವ ಕಥಾಹಂದರವನ್ನು ಹೊಂದಿದ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು. ಇನ್ನು ಏಕವ್ಯಕ್ತಿ ಪ್ರದರ್ಶನದಲ್ಲಿ ಕಲಾವಿದೆ ಭಾಗ್ಯಶ್ರೀ ಬಿ. ಪಾಳ ಅವರು ಮನೋಜ್ಞವಾಗಿ ಅಭಿನಯಿಸಿದರು.
ಕುಲಪತಿ ಡಿ.ವಿ ಪರಮಶಿವಮೂರ್ತಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.