ಕೂಡ್ಲಿಗಿ: ರಾಜ್ಯದಲ್ಲಿ ಎರಡನೇ ಕರಡಿ ಧಾಮವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕಿನ ಗುಡೇಕೋಟೆ ಕರಡಿಧಾಮವೀಗ ಪ್ರವಾಸಿ ತಾಣವಾಗಿ ರೂಪಗೊಳ್ಳುತ್ತಿದೆ.
16 ಸಾವಿರ ಹೆಕ್ಟರ್ ಪ್ರದೇಶದಲ್ಲಿರುವ ಕರಡಿ ಧಾಮದಲ್ಲಿ ಸರ್ವೋದಯ ಗ್ರಾಮದಿಂದ ಜೋಡಿ ಕಲ್ಲುವರೆಗೂ 7.5 ಕಿ.ಮೀ ದೂರವನ್ನು ಪ್ರವಾಸೋಧ್ಯಮ ಇಲಾಖೆ ಪ್ರವಾಸಿ ತಾಣವೆಂದು ಘೋಷಿಸಿದೆ. ಇದರಿಂದ ಇಲ್ಲಿ ಬೆಳಿಗ್ಗೆ 6 ಗಂಟೆಯಿಂದ ಪ್ರವಾಸಿಗರು ಚಾರಣ ಕೈಗೊಳ್ಳಬಹುದು. ಇಲ್ಲಿ ಬೆಳಿಗ್ಗೆ ಕರಡಿ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಕಾಣ ಸಿಗುತ್ತವೆ. ಚಾರಣಕ್ಕೆ ₹250, ಮಕ್ಕಳಿಗೆ ₹125 ದರ ನಿಗದಿಪಡಿಸಲಾಗಿದೆ.
ಆರಣ್ಯ ಇಲಾಖೆ ಸಿಬ್ಬಂದಿ ಚಾರಣದಲ್ಲಿ ಜೊತೆಗಿರುತ್ತಾರೆ. ರಾತ್ರಿ ಹೋಗಿ ಉಳಿಯಲು ಕರಡಿ ಧಾಮದ ಪ್ರವಾಸಿ ಮಂದಿರವಿದೆ. ಅಲ್ಲಿ ಒಂದು ಕೊಠಡಿಗೆ ₹500 ದರವಿದೆ. ಚಾರಣ ಹಾಗೂ ಪ್ರವಾಸಿ ಮಂದಿರಕ್ಕೆ ಆನ್ ಲೈನ್ ನಲ್ಲಿಮುಂಗಡ ಕಾಯ್ದಿರಿಸಿಬಹುದು. ನೇರವಾಗಿಯೂ ನೋಂದಣಿ ಮಾಡಿಸಬಹುದು.
ಪಂಚಲಿಂಗೇಶ್ವರ ಗುಹೆ ಸೇರಿದಂತೆ ಗುಡೇಕೋಟೆ ಗ್ರಾಮದ ಪಾಳೆಗಾರರ ನಿರ್ಮಾಣ ಮಾಡಿರುವ ಐತಿಹಾಸಿಕ ಗುಡ್ಡದ ಮೇಲಿನ ಉಗ್ರಾಣ, ತಣ್ಣೀರ ಬಾವಿ, ಹೋಕುಳಿ ಕಲ್ಯಾಣಿ ನೋಡುವುದರ ಜೊತೆಗೆ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳಬಹುದು. ಗ್ರಾಮದ ಹೊರ ವಲಯದಲ್ಲಿರುವ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತುಕೊಂಡಿರುವ ವಿಶಿಷ್ಟವಾದ ವಿಗ್ರಹವನ್ನು ನೋಡಬಹುದು. ಕೂಡ್ಲಿಗಿ, ಬಳ್ಳಾರಿ, ಮೊಳಕಾಲ್ಮೂರು ಕಡೆಯಿಂದ ಗುಡೇಕೋಟೆಗೆ ಬರಬಹುದು. ಬರುವಾಗ ಊಟ, ತಿಂಡಿ ತಂದರೆ ಉತ್ತಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.