ADVERTISEMENT

ವಿಜಯನಗರ | ‘ಸಚಿವ ಆನಂದ್‌ ಸಿಂಗ್‌ ಅವರಿಂದ ಕ್ರೀಡಾ ಸ್ಫೂರ್ತಿಗೆ ತಿಲಾಂಜಲಿ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 11:11 IST
Last Updated 4 ಸೆಪ್ಟೆಂಬರ್ 2022, 11:11 IST
ವಿಷ್ಣುವರ್ಧನ್‌
ವಿಷ್ಣುವರ್ಧನ್‌   

ಹೊಸಪೇಟೆ (ವಿಜಯನಗರ): ‘ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ನಗರದ ಜಿಲ್ಲಾ ಕ್ರೀಡಾಂಗಣವನ್ನು ಅಭಿವೃದ್ಧಿ ಹೆಸರಿನಲ್ಲಿ ಕ್ರೀಡೆಗಳಿಗೆ ಆಸ್ಪದ ಇಲ್ಲದಂತೆ ಮಾಡುವುದರ ಮೂಲಕ ಕ್ರೀಡಾ ಸ್ಫೂರ್ತಿಗೆ ತಿಲಾಂಜಲಿ ಹಾಡುತ್ತಿದ್ದಾರೆ’ ಎಂದು ವಿಜಯನಗರ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಅಧ್ಯಕ್ಷ ವಿಷ್ಣುವರ್ಧನ್ ಆರೋಪಿಸಿದರು.

’ನಗರದ ಮೈದಾನಕ್ಕೆ ತನ್ನದೇ ಇತಿಹಾಸ, ಪರಂಪರೆ ಇದೆ. ಆದರೆ, ದಿವಂಗತ ನಟ ಪುನೀತ್‌ ರಾಜಕುಮಾರ ಹೆಸರು ಹೇಳಿಕೊಂಡು, ಧ್ವಜಸ್ತಂಭ ನಿರ್ಮಿಸುವ ಮೂಲಕ ಸಚಿವರು ಜನರೊಂದಿಗೆ ಭಾವನಾತ್ಮಕ ತಂತ್ರಗಾರಿಕೆಯ ಆಟವಾಡುತ್ತಿದ್ದಾರೆ. ದೇಶದ ಪ್ರಧಾನಿಯವರು ಯುವ ಜನತೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿ ದೇಶದ ಕೀರ್ತಿ ಹೆಚ್ಚಿಸಬೇಕೆಂದು ಹೇಳುತ್ತಿದ್ದಾರೆ. ಆದರೆ, ಸಚಿವರು ಯುವ ಜನಾಂಗವನ್ನು ಭಾವನಾತ್ಮಕವಾಗಿ ಹಾಳು ಮಾಡುತ್ತಿದ್ದಾರೆ’ ಎಂದು ಭಾನುವಾರ ನಗರದಲ್ಲಿ ಆರೋಪ ಮಾಡಿದರು.

ನಗರದ ಕ್ರೀಡಾಂಗಣದಲ್ಲಿ ಹಾಕಿ, ವಾಲಿಬಾಲ್, ಥ್ರೋಬಾಲ್, ಬ್ಯಾಸ್ಕೆಟ್‌ಬಾಲ್, ಹರ್ಡಲ್ಸ್, ಡಿಸ್ಕಸ್‌ ಥ್ರೋ, ಜಾವಲಿನ್‌, ರೆಸ್ಲಿಂಗ್, ಕ್ರಿಕೆಟ್‌ ಸೇರಿದಂತೆ ಅನೇಕ ಕ್ರೀಡೆಗಳ ಮೂಲಕ ಜಿಲ್ಲಾ, ರಾಜ್ಯ ಹಾಗೂ ದಕ್ಷಿಣ ಏಷಿಯಾ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಿದವರ ದೊಡ್ಡ ಪಟ್ಟಿಯೇ ಸಿಗುತ್ತದೆ. ಅನೇಕರು ಅಪ್ರತಿಮ ಕ್ರೀಡಾ ಸಾಧನೆ ಮಾಡಿದ್ದಾರೆ. ಆದರೆ, ಇಂದು ಕ್ರೀಡಾಂಗಣದ ಮಧ್ಯ ಭಾಗದಲ್ಲಿ ಧ್ವಜಸ್ತಂಭ ಸ್ಥಾಪಿಸಲಾಗಿದೆ. ಇನ್ನು, ವಾಕಿಂಗ್‌ ಟ್ರ್ಯಾಕ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಹೀಗೆ ಮಾಡಿದರೆ ಆಟವಾಡಲು ಅವಕಾಶವೇ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.

ADVERTISEMENT

ಕ್ರೀಡಾಂಗಣದಲ್ಲಿ ಮೂರು ದಶಗಳಿಂದ ದಕ್ಷಿಣ ಏಷಿಯಾ ಮಟ್ಟದ ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗೆ ಪ್ರೋತ್ಸಾಹಿಸುತ್ತ ಬಂದಿರುವ ವಿಜಯನಗರ ಬ್ಯಾಸ್ಕೆಟ್‌ಬಾಲ್‌ ಕ್ಲಬ್‍ ಸ್ವಂತ ಆಸ್ತಿ ಅಲ್ಲವಾದರೂ ಲಕ್ಷಾಂತರ ಹಣ ಖರ್ ಚುಮಾಡಿ, ಅನೇಕರಿಗೆ ವೇದಿಕೆ ಒದಗಿಸಿದೆ. ಅದನ್ನು ಕನಿಷ್ಠ ಸಂಘದವರೊಂದಿಗೆ ಸೌಜನ್ಯಕ್ಕಾದರೂ ಚರ್ಚಿಸಬೇಕಿತ್ತು. ಆದರೆ, ಜೆ.ಸಿ.ಬಿ.ಯಿಂದ ಹಾಳು ಮಾಡಲಾಯಿತು. ಅಭಿವೃದ್ಧಿ ಜನರಿಗೆ ಪೂರಕವಾಗಿರಬೇಕು ಹೊರತು ವಿರುದ್ಧ ಅಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.