ಹೊಸಪೇಟೆ (ವಿಜಯನಗರ): ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹಂಪಿಗೆ ಭೇಟಿ ನೀಡಿ ವಿರೂಪಾಕ್ಷೇಶ್ವರದ ದರ್ಶನ ಪಡೆದರು. ಅತ್ಯಂತ ವೈಭವಯುತವಾಗಿ ಮೆರೆದಿದ್ದ ಸ್ಥಳ ನಾಶವಾದ ಬಗೆಯನ್ನು ಕಂಡು ನೋವಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
‘ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅತ್ಯಂತ ಶ್ರೇಷ್ಠ ದೊರೆಯಾಗಿದ್ದ. ಆತ ಎಲ್ಲರಿಗೂ ಪ್ರಿಯನಾದಂತಹ ರಾಜನಾಗಿದ್ದ. ಆಡಳಿತ ಎಂದರೆ ಹೇಗಿರಬೇಕು ಎಂಬುದಕ್ಕೆ ಆತ ಆದರ್ಶಪ್ರಾಯನಾಗಿದ್ದ. ಈಗಿನ ಆಡಳಿತಗಾರರಿಗೂ ಆತ ಬಹುದೊಡ್ಡ ಮಾದರಿ’ ಎಂದು ಸಚಿವರು ತಿಳಿಸಿದರು.
‘ಹಂಪಿಯೇನೋ ಹಾಳಾಯಿತು, ಹೀಗಿದ್ದರೂ ಇಲ್ಲಿನ ಸ್ಮಾರಕಗಳು ಗತಕಾಲದ ವೈಭವವನ್ನು ಈಗಲೂ ಹೇಳುತ್ತಿವೆ, ಹೀಗಾಗಿ ಇಲ್ಲಿನ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮೆಲರ ಮೇಲಿದೆ. ಭಾರತೀಯ ಪುರಾತತ್ವ ಸರ್ವೇಕ್ಷಾಣಾ ಇಲಾಖೆ (ಎಎಸ್ಐ) ತನ್ನಿಂದಾದ ಕೆಲಸವನ್ನು ಮಾಡುತ್ತಿದೆ’ ಎಂದು ನಿರ್ಮಲಾ ಹೇಳಿದರು.
‘ಹಂಪಿಯ ಬಗ್ಗೆ ನನಗೆ ಹಲವಾರು ಮಂದಿ ಹೇಳಿದ್ದರು. ಆದರೆ ಇದುವರೆಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಯುನೆಸ್ಕೊ ಗುರುತಿಸಿರುವ ಐತಿಹಾಸಿಕ ತಾಣದ ಪ್ರತಿಯೊಂದು ಶಿಲೆಯು ಇಲ್ಲಿಯ ಪರಂಪರೆಯನ್ನು ಪ್ರತಿಬಿಂಬಿಸುವಂತಿ’ ಎಂದು ಅವರು ಅಭಿಪ್ರಾಯಪಟ್ಟರು.
ಇದಕ್ಕೆ ಮೊದಲು ವಾದ್ಯಘೋಷಗಳೊಂದಿಗೆ ಸಚಿವರನ್ನು ದೇವಸ್ಥಾನಕ್ಕೆ ಸ್ವಾಗತಿಸಲಾಯಿತು. ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ವಿರೂಪಾಕ್ಷ ಕ್ಷೇತ್ರದ ಮಹತ್ವ ತಿಳಿಸಿ ವಿರೂಪಾಕ್ಷ ವಿಗ್ರಹದ ವಿಶೇಷತೆಗಳನ್ನೂ ವಿವರಿಸಿದರು.
ಸಂಸದ ಇ.ತುಕಾರಾಂ, ವಿಜಯನಗರ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.