ಹೊಸಪೇಟೆ (ವಿಜಯನಗರ): ನಟ ಪುನೀತ್ ರಾಜಕುಮಾರ್ ನಿಧನದಿಂದ ತೀವ್ರ ಮನನೊಂದಿದ್ದ ತಾಲ್ಲೂಕಿನ ಕಮಲಾಪುರದ ನಿವಾಸಿ ಶುಕ್ರವಾರ ರಾತ್ರಿ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಗೆ (ಎಲ್ಎಲ್ಸಿ) ಜಿಗಿದು ಪ್ರಾಣ ಬಿಟ್ಟಿದ್ದಾರೆ.
ಮೃತರನ್ನು ಕಮಲಾಪುರದ 14ನೇ ವಾರ್ಡಿನ ಕಮ್ಮಾರ ದಿನ್ನಿ ಬಡಾವಣೆ ನಿವಾಸಿ ಕಾಳಪ್ಪ (60) ಎಂದು ಗುರುತಿಸಲಾಗಿದೆ.
‘ಕಾಳಪ್ಪ ಪುನೀತ್ ಅವರ ಕಟ್ಟಾ ಅಭಿಮಾನಿ. ಮಧ್ಯಾಹ್ನ ಟಿ.ವಿ.ಯಲ್ಲಿ ಪುನೀತ್ ಅವರ ನಿಧನದ ಸುದ್ದಿ ನೋಡಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನೀರು, ಆಹಾರ ಸೇವಿಸದೆ ಸಂಜೆವರೆಗೂ ಟಿ.ವಿ. ನೋಡುತ್ತ ಕುಳಿತಿದ್ದರು. ಸಂಜೆ ತೀವ್ರ ದುಃಖಿತರಾಗಿ ಕಾಲುವೆಗೆ ಜಿಗಿದಿದ್ದರು. ಸ್ಥಳೀಯರು ಗಮನಿಸಿ ಅವರನ್ನು ರಕ್ಷಿಸಿದ್ದರು. ಪುನಃ ರಾತ್ರಿ ಮನೆಯಿಂದ ಹೋಗಿ ಕಾಲುವೆಗೆ ಜಿಗಿದಿದ್ದಾರೆ. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿ ಕೊಂಡು ಹೋಗಿದ್ದಾರೆ’ ಎಂದು ಅವರ ಸ್ನೇಹಿತ ಕನ್ನೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಪುನೀತ್ ಅವರ ಅಭಿಮಾನಿ ಕಾಳಪ್ಪ ಕಾಲುವೆಗೆ ಜಿಗಿದಿರುವ ವಿಷಯ ಗೊತ್ತಾಗಿದೆ. ಇನ್ನಷ್ಟೇ ಅವರ ಶರೀರ ಸಿಗಬೇಕಿದೆ’ ಎಂದು ಡಿವೈಎಸ್ಪಿ ಕಾಶಿಗೌಡ ತಿಳಿಸಿದ್ದಾರೆ. ಇನ್ನಷ್ಟೇ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.