ADVERTISEMENT

ವಿಜಯನಗರ: ಗುಡುಗು ಸಹಿತ ಬಿರುಸು ಮಳೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 16:04 IST
Last Updated 23 ಏಪ್ರಿಲ್ 2021, 16:04 IST

ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ರಾತ್ರಿ ಗುಡುಗು, ಮಿಂಚಿನೊಂದಿಗೆ ಬಿರುಸು ಮಳೆಯಾಯಿತು.

ಸಂಜೆ ಏಳು ಗಂಟೆಗೆ ಜೋರು ಗಾಳಿ ಬೀಸಲು ಆರಂಭಿಸಿತು. ಬಳಿಕ ಭಾರಿ ಗುಡುಗು, ಮಿಂಚಿನೊಂದಿಗೆ ಆರಂಭಗೊಂಡ ಬಿರುಸು ಮಳೆ ಸತತವಾಗಿ ಸುರಿಯಿತು. ರಾತ್ರಿ ಒಂಬತ್ತು ಗಂಟೆಯ ನಂತರವೂ ಮಳೆ ಮುಂದುವರೆದಿತ್ತು. ಮಳೆಯ ನಡುವೆ ಭಾರಿ ಗುಡುಗು, ಸಿಡಿಲಿನ ಸದ್ದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು.

ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುತ್ತಿತ್ತು. ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಇಡೀ ನಗರ ಅಂಧಕಾರದಲ್ಲಿ ಮುಳುಗಿತ್ತು. ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಮಳೆಯಲ್ಲೇ ಗಸ್ತು ತಿರುಗಿದರು. ಮನೆಗಳಿಂದ ಹೊರಬರದಂತೆ ಧ್ವನಿವರ್ಧಕಗಳ ಮೂಲಕ ತಿಳಿಸಿದರು.

ADVERTISEMENT

ತಾಲ್ಲೂಕಿನ ಹೊಸೂರು, ನಾಗೇನಹಳ್ಳಿ, ಬಸವನದುರ್ಗ, ಧರ್ಮದಗುಡ್ಡ, ಇಪ್ಪಿತ್ತೇರಿ ಮಾಗಾಣಿ, ವ್ಯಾಸನಕೆರೆ, ಸಂಕ್ಲಾಪುರ, ಕಾರಿಗನೂರು, ಕೊಂಡನಾಯಕನಹಳ್ಳಿ, ಮಲಪನಗುಡಿ, ಹಂಪಿ, ಕಮಲಾಪುರ ಸೇರಿದಂತೆ ಹಲವೆಡೆ ಬಿರುಸು ಮಳೆಯಾಗಿರುವುದು ವರದಿಯಾಗಿದೆ.

ಶುಕ್ರವಾರ ನಸುಕಿನ ಜಾವ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಬೇಸಿಗೆ ಆರಂಭಗೊಂಡ ನಂತರ ಮೊದಲ ಸಲ ಉತ್ತಮ ಮಳೆಯಾಗಿರುವುದರಿಂದ ತಾಪಮಾನ ಭಾರಿ ಕುಸಿತ ಕಂಡಿದೆ. ಸೆಕೆ, ಬಿಸಿಗಾಳಿಯಿಂದ ಬಳಲುತ್ತಿದ್ದ ಜನರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.