ಹೊಸಪೇಟೆ (ವಿಜಯನಗರ): ‘ಟಿ.ವಿ. ಚಾನೆಲ್ಗಳಿಂದ ಗ್ರಾಮೀಣ ಕಲೆ ಕಣ್ಮರೆಯಾಗುತ್ತಿದೆ. ದೇಸಿ ಕಲೆಗಳಿಗೆ ಅದರಲ್ಲಿ ವೇದಿಕೆ ಸಿಗುತ್ತಿಲ್ಲ’ ಎಂದು ಮಲಪನಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ನಾಯ್ಕ ವಿಷಾದಿಸಿದರು.
ತಾಲ್ಲೂಕಿನ ಕಡ್ಡಿರಾಂಪುರದ ಶ್ರೀ ಮರಿಸ್ವಾಮಿ ತಾತ ಜಾತ್ರೆ ಅಂಗವಾಗಿ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಸೋಮವಾರ ರಾತ್ರಿ ಕಡ್ಡಿರಾಂಪುರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವ–2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕಲಾವಿದರಿಗೆ ಸರ್ಕಾರದ ನೆರವು ಇನ್ನೂ ಸಿಕ್ಕಿಲ್ಲ. ಗ್ರಾಮೀಣ ಕಲಾವಿದರನ್ನು ಗುರುತಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಮಾಡುತ್ತಿರುವುದು ಉತ್ತಮ ಕೆಲಸ. ಶ್ರೀ ಮರಿದೇವ ಸಾಂಸ್ಕೃತಿಕ ಕಲಾವೃಂದವು ಹಂಪಿ ಸುತ್ತಮುತ್ತ ಗ್ರಾಮೀಣ ಕಲೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನಾರ್ಹ ಕೆಲಸ ಎಂದು ಕೊಂಡಾಡಿದರು.
ಬಿ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಜೆ.ಎಂ. ವೃಷಬೇಂದ್ರಯ್ಯ, ಹಂಪಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಗೋಪಾಲ್, ಪಿ.ಎನ್.ಹನುಮಂತಪ್ಪ, ರಜಿನಿ ಕೆ. ಷಣ್ಮುಖ ಗೌಡ, ಹಂಪಮ್ಮ, ಮಲಪನಗುಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ಬಿಬಾಯಿ ಪಂಪಾ ನಾಯ್ಕ, ಕೆ.ಉದ್ದಾನಪ್ಪ ಸಂಘ ಪರಿವಾರದ ಶ್ರೀ ವೀರಸ್ವಾಮಿ, ಕಲಾವೃಂದದ ಸಂಸ್ಥಾಪಕ ಅಂಗಡಿ ವಾಮದೇವ, ಕೆ.ಪಂಪನಗೌಡ, ಎಚ್.ಕೆ.ಶರಣೇಶ, ಎ.ದೊಡ್ಡಬಸಪ್ಪ ಇದ್ದರು.
ಮಧುಸೂದನ್ ಯಾದವ್ ಅವರು ಸುಗಮ ಸಂಗೀತ, ಅಂಗಡಿ ಸಮರ್ಥ– ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನವ್ಯ ಅಂಗಡಿ, ಲಾವಣ್ಯ ಕಡ್ಡಿರಾಂಪುರ ಅವರು ಭರತನಾಟ್ಯ ಪ್ರಸ್ತುತಪಡಿಸಿದರು. ಅಪೂರ್ವ, ಅಮೃತ, ಗೀತ ಪ್ರಿಯ, ಯಲ್ಲಪ್ಪ ಭಂಡಾರದಾರ್ ಜಾನಪದ ಗೀತೆ ಹಾಡಿದರು. ಕೃಷ್ಣ ನಾಟ್ಯ ಡಾನ್ಸ್ ತಂಡದವರು ನೃತ್ಯ ಮಾಡಿದರು. ಎಂ.ಯೋಗೇಶ್ ತಬಲ, ಮಹೇಶ್ ಆಚಾರ್ ಹಾರ್ಮೋನಿಯಂ ನುಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.