ಹೊಸಪೇಟೆ (ವಿಜಯನಗರ): ಆಯುಧಗಳಿಂದ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಹೊಸಪೇಟೆಯ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಕಿಶನ್ ಬಿ. ಮಾಡಲಗಿ ಅವರು ಎರಡು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.
₹2 ಸಾವಿರ ದಂಡ ಕೂಡ ವಿಧಿಸಿದ್ದಾರೆ. ಒಂದುವೇಳೆ ದಂಡ ಕಟ್ಟಲು ಆಗದಿದ್ದಲ್ಲಿ 7 ದಿನ ಸಾದಾ ಶಿಕ್ಷೆ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. ನಗರದ ಅಗಸರ ಓಣಿಯ ಆನಂದ ಅಲಿಯಾಸ್ ಕಿಚ್ಚ ಪರಸಪ್ಪ, ಚಪ್ಪರದಹಳ್ಳಿಯ ಗೋವಿಂದ ಬಿ. ಅಲಿಯಾಸ್ ಗುಕ್ಕ ಹೊನ್ನೂರಪ್ಪ ಶಿಕ್ಷೆಗೆ ಗುರಿಯಾದವರು.
ನಡೆದದ್ದೇನು?
2021ರ ಜುಲೈ 15ರಿಂದ 16ರ ನಡುವೆ ಕೌಲ್ಪೇಟೆಯ ಮಟನ್ ಮಾರುಕಟ್ಟೆ ಬಳಿಯ ಮನೆಯ ಬೀಗ ಮುರಿದು ₹20,000 ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಬಿ. ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಎಸ್. ಮಿರಜಕರ್ ಸರ್ಕಾರದ ಪರ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.