ADVERTISEMENT

ಹೊಸಪೇಟೆ| ಮನೆಯಲ್ಲಿ ಗೊಬ್ಬರ ತಯಾರಿಕೆ ತರಬೇತಿ: ಮನೋಹರ್‌ ನಾಗರಾಜ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 12:48 IST
Last Updated 14 ಏಪ್ರಿಲ್ 2023, 12:48 IST
ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ಉದ್ಘಾಟಿಸಿದರು
ಹೊಸಪೇಟೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ‘ಮನೆಯಲ್ಲಿ ತಯಾರಾಗುವ ಹಸಿ ಕಸದಿಂದ ಗೊಬ್ಬರ ತಯಾರಿಸುವುದರ ಬಗ್ಗೆ ತರಬೇತಿ ಹಾಗೂ ನೆರವು ನೀಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಮನೋಹರ್‌ ನಾಗರಾಜ ತಿಳಿಸಿದರು.

ಇಲ್ಲಿನ ವಿವೇಕಾನಂದ ನಗರದ ಸಮುದಾಯ ಭವನದಲ್ಲಿ ಇನ್ನರ್ ವೀಲ್ ಕ್ಲಬ್ ಹಾಗೂ ನಗರಸಭೆ ಸಹಭಾಗಿತ್ವದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ‘ತ್ಯಾಜ್ಯ ವಿಲೇವಾರಿ ಎಲ್ಲಿ- ಹೇಗೆ?’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿ ಪ್ರತಿದಿನ 110 ರಿಂದ 120 ಟನ್ ಕಸ ಉತ್ಪತ್ತಿಯಾಗುತ್ತಿದೆ. ತ್ಯಾಜ್ಯ ಸಂಸ್ಕರಣಾ ಘಟಕ ಶೇ 50 ರಷ್ಟು ಭರ್ತಿಯಾಗಿದೆ. ಇದೇ ರೀತಿ ಮುಂದುವರೆದರೆ ನಗರದಲ್ಲಿ ಕಸದ ದೊಡ್ಡ ಸಮಸ್ಯೆ ಸೃಷ್ಟಿಯಾಗಬಹುದು. ಹೀಗಾಗಿಯೇ ಮನೆಗಳಲ್ಲಿಯೇ ಹಸಿ ಕಸದಿಂದ ಗೊಬ್ಬರ ತಯಾರಿಸಿದರೆ ಭವಿಷ್ಯದಲ್ಲಿ ತಲೆದೋರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ADVERTISEMENT

ಕಾರಿಗನೂರಿನ ಬಳಿ 21 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕವಿದೆ. ಈಗಾಗಲೇ 13 ಎಕರೆಯಲ್ಲಿ ಕಸ ಭರ್ತಿಯಾಗಿದೆ. ಇದೇ ರೀತಿ ಕಸ ಭರ್ತಿಯಾಗುತ್ತ ಹೋದರೆ ಮುಂದೆ ಕಸ ಹಾಕಲು ಸ್ಥಳವಿಲ್ಲದಂತಾಗಬಹುದು. ತ್ಯಾಜ್ಯ ವಿಲೇವಾರಿ ಘಟಕದಿಂದ ಬರುವ ದುರ್ವಾಸನೆ ಕಿ.ಮೀ ಗಟ್ಟಲೆ ಹರಡಬಹುದು ಎಂದರು.

ಇನ್ನರ್ ವೀಲ್ ಕ್ಲಬ್‌ ಅಧ್ಯಕ್ಷೆ ರೇಖಾ ಪ್ರಕಾಶ್, ಕಾರ್ಯದರ್ಶಿ ಅಶ್ವಿನಿ ಶ್ರೀನಿವಾಸರಾವ್, ನಗರಸಭೆಯ ಪರಿಸರ ವಿಭಾಗದ ಜಗದೀಶ್ ಎಚ್.ಎಂ., ಆರತಿ, ವಿವೇಕಾನಂದ ನಗರದ ನಿವಾಸಿಗಳಾದ ಪದ್ಮಲಕ್ಷ್ಮಿ, ಇನ್ನರ್ ವೀಲ್ ಉಮಾ, ಸುಜಾತಾ, ವಿದ್ಯಾ ಸಿಂಧಗಿ, ಸುನೀತಾ, ರಜನಿ, ರಮ್ಯಾ, ಶೈಲಜಾ ಒಡೆಯರ್, ಲಕ್ಷ್ಮೀ, ವಿಜಯಾ ಕಟ್ಟಾ, ನಂದಾ, ಸಂಜನಾ, ನಾಗರತ್ನ, ಸುಜಾತಾ ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.