ಹೊಸಪೇಟೆ (ವಿಜಯನಗರ): ಇಲ್ಲಿನ ವಿ.ಎನ್.ರಾಯಲ್ ಗಾರ್ಡನ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯವರು ನಡೆಸಿಕೊಟ್ಟ ‘ಸಿರಿಸಿಂಗಾರಿ’ ಯಕ್ಷಗಾನ ಕರಾವಳಿ ಕರ್ನಾಟಕದ ಶ್ರೀಮಂತ ಕಲೆಯುನ್ನು ಅದ್ಭುತವಾಗಿ ನಗರದ ಜನತೆಗೆ ಪರಿಚಯಿಸಿತು. ನಾಟ್ಯ, ಮಾತುಗಾರಿಕೆ ಎರಡರಲ್ಲೂ ರಂಜಿಸಿದ ಕಲಾವಿದರು ಮೆಚ್ಚುಗೆಗೆ ಪಾತ್ರರಾದರು.
‘ವೀರ ಚಂದ್ರಹಾಸ’ ಚಲನಚಿತ್ರದಲ್ಲಿ ಕಥಾನಾಯಕನಾಗಿದ್ದ ಶಿಥಿಲ್ ಶೆಟ್ಟಿ ಮತ್ತು ನಾಯಕಿ ನಟಿ ನಾಗಶ್ರೀ ಜಿ.ಎಸ್. ಅವರು ವಿಶೇಷ ಆಕರ್ಷಣೆಯಾಗಿದ್ದರು. ಇಬ್ಬರೂ ತಾವು ಎಂತಹ ಅದ್ಭುತ ಕಲಾವಿದರು ಎಂಬುದನ್ನು ರಂಗದಲ್ಲಿ ಸಾಬೀತುಪಡಿಸಿದರು.
ದೇವರಿಲ್ಲ ಎಂದು ಬಲವಾಗಿ ನಂಬಿಕೊಂಡಿದ್ದ ಯುವಕನಿಗೆ ಕೊನೆಗೂ ದೇವರ ಇರುವಿಕೆ ಅರಿವಿಗೆ ಬಂದು ಅದನ್ನು ಒಪ್ಪಿಕೊಳ್ಳುವ ಸಣ್ಣ ಎಳೆಯ ಕಥೆಗೆ ಶಿವಲೀಲೆಯ ಬೆಸುಗೆ ಹಾಕಿ ಯಕ್ಷಗಾನ ಕಥೆ ಹೆಣೆಯಲಾಗಿದ್ದು, ಮಾತುಗಾರಿಕೆ, ಕುಣಿತ ಎರಡಕ್ಕೂ ಅದ್ಭುತ ಅವಕಾಶವನ್ನು ಒದಗಿಸಿಕೊಟ್ಟಿತು. ‘ನಿಜಕ್ಕೂ ಇದೊಂದು ಅತ್ಯುತ್ತಮ ಯಕ್ಷಗಾನ ಪ್ರದರ್ಶನವಾಗಿತ್ತು. 30 ವರ್ಷಗಳಿಂದ ನಾನು ನಗರದಲ್ಲಿ ಯಕ್ಷಗಾನ ನೋಡುತ್ತ ಬಂದಿದ್ದೇನೆ, ಸಿರಿಸಿಂಗಾರಿ ಅತ್ಯುತ್ತಮ ಎಂದೇ ನನ್ನ ಭಾವನೆ’ ಎಂದು ಯಕ್ಷಗಾನ ಕಲಾಸಕ್ತರೂ ಆಗಿರುವ ಪ್ರಕಾಶಕ ಗಣೇಶ್ ಯಾಜಿ ತಿಳಿಸಿದರು.
ಭಾಗವತಿಕೆಯಲ್ಲಿ ಆರ್.ವಿನಯ ಶೆಟ್ಟಿ ಕಾವ್ರಾಡಿ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಚೆಂಡೆಯಲ್ಲಿ ರಾಕೇಶ್ ಮಲ್ಯ ಹಳ್ಳಾಡಿ ಗಮನ ಸೆಳೆದರು. ಮುಮ್ಮೇಳದ ಇತರ ಎಲ್ಲ ಕಲಾವಿದರು ಸಹ ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ನಗರದ ಯಕ್ಷಗಾನ ಕಲಾಸಕ್ತರು ಹಾಗೂ ಅಭಿಮಾನಿ ಸ್ನೇಹಿತರು ಈ ಕಾರ್ಯಕ್ರಮ ಸಂಘಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.