ADVERTISEMENT

ಅಂತಿಮ ದಿನ ಶಕ್ತಿ ಪ್ರದರ್ಶನ...

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 12:31 IST
Last Updated 18 ಏಪ್ರಿಲ್ 2013, 12:31 IST

ವಿಜಾಪುರ: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ನಡೆಸಿದರು.

ಕಾಂಗ್ರೆಸ್ ಪಕ್ಷದ ಬಬಲೇಶ್ವರ ಕ್ಷೇತ್ರದ ಅಭ್ಯರ್ಥಿ ಎಂ.ಬಿ. ಪಾಟೀಲ, ವಿಜಾಪುರ ನಗರ ಕ್ಷೇತ್ರದ ಅಭ್ಯರ್ಥಿ ಮಕಬೂಲ್ ಬಾಗವಾನ, ನಾಗಠಾಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ, ವಿಜಾಪುರ ನಗರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಬಿ. ನಾಗೂರ (ಬಾಬು) ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಎಂ.ಬಿ. ಪಾಟೀಲ: ಇಲ್ಲಿಯ ಸಿದ್ಧೇಶ್ವರ ದೇವಸ್ಥಾನದಿಂದ ಸಾವಿರಾರು ಕಾರ್ಯ ಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ನಾಮಪತ್ರ ಸಲ್ಲಿಸಿದರು.

ಬಬಲೇಶ್ವರ ಕ್ಷೇತ್ರದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕಾರ್ಯಕ ರ್ತರು, ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಾದ್ಯಗಳ ಅಬ್ಬರ ಇರಲಿಲ್ಲ. ಎಂ.ಬಿ. ಪಾಟೀಲ ತಮ್ಮ ಕಾರಿನ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಂಡುರಾವ್ ಕುಲಕರ್ಣಿ, ಸೋಮ ನಾಥ ಬಾಗಲಕೋಟೆ, ಬಸವರಾಜ ದೇಸಾಯಿ, ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ, `ಜಿಲ್ಲೆಯಲ್ಲಿ ಕಾಂಗ್ರೆಸ್ ಅಲೆ ಇದೆ ಎನ್ನುವುದಕ್ಕೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸೇರಿದ್ದ ಜನರೇ ಸಾಕ್ಷಿ. ಇದು ವಿರೋಧ ಪಕ್ಷಗಳಿಗೆ ದಿಗಿಲು ಮೂಡಿಸಿದೆ' ಎಂದರು.

`ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸ ಲಿದ್ದು, ಜಿಲ್ಲೆಯ 8 ಕ್ಷೇತ್ರಗಳು ಪಕ್ಷದ ತೆಕ್ಕೆಗೆ ಬರಲಿವೆ. ಬಬಲೇಶ್ವರ ಕ್ಷೇತ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಕ್ಷೇತ್ರದಲ್ಲಿ ಹೊಸ ಅಲೆ ನಿರ್ಮಾಣವಾಗಿದ್ದು, ಹೆಚ್ಚಿನ ಬಹುಮತ ಲಭಿಸಲಿದೆ' ಎಂದು ಹೇಳಿದರು.

ಮಕಬೂಲ್ ಬಾಗವಾನ: ವಿಜಾಪುರ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಕಬೂಲ್ ಬಾಗವಾನ ಇಲ್ಲಿಯ ಜೋಡಗುಮ್ಮಟದಿಂದ ಗಾಂಧಿಚೌಕ್, ಬಸ್ ನಿಲ್ದಾಣದ ಮಾರ್ಗವಾಗಿ ತಹಶೀಲ್ದಾರ ಕಚೇರಿಗೆ ವೆುರವಣಿಗೆ ಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಸಹಸ್ರಾರು ಜನ ಪಾಲ್ಗೊಂಡಿದ್ದರು. ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಜಾದ್ ಪಟೇಲ್, ಎಲ್. ಎಲ್. ಉಸ್ತಾದ್, ಎಂ.ಎಂ. ಸುತಾರ, ಎಸ್.ಎಂ. ಪಾಟೀಲ ಗಣಿಹಾರ, ಹಾಸಿಂಪೀರ ವಾಲಿಕಾರ, ಜಾವೀದ ಜಮಾದಾರ ಇತರರು ಇದ್ದರು.

ದೇವಾನಂದ ಚವ್ಹಾಣ: ಕಾಂಗ್ರೆಸ್ ಪಕ್ಷದ ನಾಗಠಾಣ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ದೇವಾನಂದ ಚವ್ಹಾಣ ಅವರು ನಾಗಠಾಣ ಮೀಸಲು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ತಮ್ಮ ಕ್ಷೇತ್ರದ ಸಹಸ್ರಾರು ಜನ ಕಾರ್ಯಕರ್ತರೊಂದಿಗೆ ಮೆರವಣಿಗೆ ನಡೆಸಿದರು. ಬಂಜಾರಾ ಮಹಿಳೆಯರು ಸಾಂಪ್ರದಾಯಿಕ ತೊಡುಗೆ ತೊಟ್ಟು ಹೆಜ್ಜೆ ಹಾಕುತ್ತ ಗಮನ ಸೆಳೆದರು.

ಜೆಡಿಎಸ್ ಮುಖಂಡರಾದ ಬಸನ ಗೌಡ ಪಾಟೀಲ ಯತ್ನಾಳ, ಎಂ.ಆರ್. ಪಾಟೀಲ (ಬಳ್ಳೊಳ್ಳಿ), ದಾನಪ್ಪ ಕಟ್ಟಿಮನಿ ಮತ್ತಿತರರು, ಬಂಜಾರಾ ಸಮಾಜದ ಧರ್ಮಗುರುಗಳು, ಮುಖಂಡರು ಪಾಲ್ಗೊಂಡಿದ್ದರು.

ನಾಗೂರ (ಬಾಬು): ವಿಜಾಪುರ ನಗರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಬಿ. ನಾಗೂರ (ಬಾಬು) ತಮ್ಮ ಪಕ್ಷದ ಕಾರ್ಯ ಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ಎಂ.ಬಿ. ಪಾಟೀಲ, ಮಕಬೂಲ್ ಬಾಗವಾನ, ಡಾ.ಕೆ.ಬಿ. ನಾಗೂರ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ಬುಧವಾರ ಕಾರ್ಯಕರ್ತ ರೊಂದಿಗೆ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.