ADVERTISEMENT

ಅದ್ದೂರಿ ಮೆರವಣಿಗೆ; ಕಲಾವೈಭವ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:55 IST
Last Updated 10 ಸೆಪ್ಟೆಂಬರ್ 2011, 10:55 IST

ವಿಜಾಪುರ: ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದಿಂದ ಇಲ್ಲಿಯ ಶಿವಾಜಿ ಚೌಕ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಅದ್ದೂರಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು.

ಸೊಲ್ಲಾಪುರದ ಲೇಜಿಮ್, ರಾಯಚೂರಿನ ಹಗಲುವೇಷ ಕುಣಿತ, ಬಳ್ಳಾರಿಯ ತಾಶಾ ಜಾಂಜ್ ಹಾಗೂ ವೀರಗಾಸೆ, ಸಾಗರದ ಮಹಿಳೆಯರಿಂದ ಡೊಳ್ಳು ಕುಣಿತ, ಆಲಮೇಲದ ಕೋಲಾಟ, ಕಾಖಂಡಕಿಯ ಕರಡಿ ಮಜಲು, ಹುಲ್ಯಾಳ ತಾಶಾ ವಾದನ, ಸಿಂದಗಿಯ ಬ್ರಾಸ್‌ಬ್ಯಾಂಡ್, ಆಸಂಗಿಯ ಜಾಂಜ್ ಹಾಗೂ ಜಾನಪದ ಕಲಾ ತಂಡದವರು ಭಾಗವಹಿಸಿದ್ದರು.

ಶಿವಾಜಿ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ಲಕ್ಷ್ಮಿ ದೇವಸ್ಥಾನ, ಸರಾಫ್ ಬಜಾರ, ರಾಮ ಮಂದಿರ ರಸ್ತೆ, ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ್, ಶಾಹು ನಗರದ ಮೂಲಕ ತಾಜ ಬಾವಡಿ ತಲುಪಿತು. ಐತಿಹಾಸಿಕ ತಾಜಬಾವಡಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಸಾಗರದ ಮಹಿಳಾ ಡೊಳ್ಳು ಕುಣಿತ ತಂಡದವರು ಡೊಳ್ಳು ಬಾರಿಸುತ್ತ ಪಿರಮಿಡ್ ರಚಿಸಿ ಎಲ್ಲರನ್ನೂ ಚಕಿತಗೊಳಿಸಿದರು. ಈ ತಂಡ ಹಾಗೂ ಆಲಮೇಲದ ಪುಟಾಣಿಗಳ ಕೋಲಾಟವನ್ನು ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಅಲ್ಲಲ್ಲಿ ನಿಂತು ವೀಕ್ಷಿಸುತ್ತಿದ್ದರು.

ಅಲಂಕರಿಸಿದ್ದ ಕುದುರೆಗಳ ಮೇಲೆ ಸೂಫಿ ಸಂತರು, ಶರಣರ ವೇಷಧಾರಿಗಳು ನಡೆಸಿದ ಸವಾರಿ ರಾಜ ವೈಭವವನ್ನು ನೆನಪಿಸಿತು. ಆನೆಯ ಗಂಭೀರ ನಡಿಗೆ ಗಮನ ಸೆಳೆಯಿತು. ಶಿವಾಜಿ ವೃತ್ತದಲ್ಲಿ ಮೆರವಣಿಗೆಗೆ ಶಾಸಕ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಚಾಲನೆ ನೀಡಿದರು. ಮಹಾಮಂಡಳದ ಅಧ್ಯಕ್ಷ ಮಹೇಶ ಜಾಧವ, ಉತ್ಸವ ಸಮಿತಿಯ ಅಪ್ಪು ಬುಕ್ಕಣಿ, ಶಿವರುದ್ರ , ವಿಜು ಕೋವಳ್ಳಿ, ಚಂದು ಉಮರ್ಜಿ, ರಾಘು, ಸಂತೋಷ, ಉಮೇಶ, ಈರಣ್ಣ, ನಗರಸಭೆ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.