ಇಂಡಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅನಧಿಕೃತವಾಗಿ ನೂರಾರು ಸಾರಾಯಿ ಅಂಗಡಿಗಳು ತೆರೆದುಕೊಂಡಿವೆ. ಇದರಿಂದ ಗ್ರಾಮಗಳಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಜನ ಜೀವನಕ್ಕೆ ಧಕ್ಕೆಯಾಗುತ್ತಿದೆ ಎಂದು ಕೂಡಲೇ ಅಂಥ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.
ಹಗಲಿನಲ್ಲಿಯೇ ಕುಡಿದು ಒದ್ದಾಡುವುದು, ಮಾರ್ಗದಲ್ಲಿ ಬರುವ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಅವಾಚ್ಯ ಶಬ್ದಗಳನ್ನು ಬಳಸುವುದರಿಂದ ಶಾಲಾ ಮಕ್ಕಳು, ಮಹಿಳೆಯರು ಭಯ ಭೀತರಾಗಿದ್ದಾರೆ. ತಾಲ್ಲೂಕಿನ ಮಿರಗಿ ಗ್ರಾಮದಲ್ಲಂತೂ ಅತಿ ಹೆಚ್ಚಿನ ಸಾರಾಯಿ ಅಂಗಡಿಗಳಿವೆ. ಇದೆಲ್ಲದರಿಂದ ಗ್ರಾಮಗಳಲ್ಲಿ ಅಶಾಂತಿ ತಲೆದೋರಿದೆ.
ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಅನಧಿಕೃತ ಸಾರಾಯಿ ಅಂಗಡಿಗಳನ್ನು ಮುಚ್ಚಿಸಬೇಕು, ಅನಧಿಕೃತವಾಗಿ ತೆರೆದ ಸಾರಾಯಿ ಅಂಗಡಿಗಳ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಜನ ಪದಾಧಿಕಾರಿಗಳು ಗುರುವಾರ ಉಪ ಕಂದಾಯ ವಿಭಾಗಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಪತ್ರ ನೀಡಿದರು.
ತಮ್ಮ ಮನವಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಅಬಕಾರಿ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವದಾಗಿ ಎಚ್ಚರಿಕೆ ಕೂಡಾ ನೀಡಿದ್ದಾರೆ. ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಾಳು ಮುಳಜಿ, ವಿದ್ಯಾರ್ಥಿ ಘಟಕದ ಜಿಲ್ಲಾ ಉಪಾಧ್ಯಕ್ಷ ಸಲೀಂ ಬಾಗವಾನ್, ಕರವೇ ಪ್ರಧಾನ ಕಾರ್ಯದರ್ಶಿ ಮಹೇಶ ಕುಂಬಾರ, ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ಶಿವಾನಂದ ಬಡಿಗೇರ, ಸಹ ಕಾರ್ಯದರ್ಶಿ ರಾಜು ಪಡಗಾನೂರ, ಮಿರಗಿ ಗ್ರಾ.ಪಂ. ಅಧ್ಯಕ್ಷ ಶ್ರೀಶೈಲ ರಾವೂರ, ಶಿವಾನಂದ ಬಂಡರೋಡ, ಶ್ರೆಶೈಲ ಖಸ್ಕ, ಗುರು ಪೂಜಾರಿ, ಪುಂಡು ಸೀರ, ಶ್ರೀಶೈಲ ತೊನಶ್ಯಾಳ, ಶ್ರೀಶೈಲ ಹಳ್ಳಿ, ಸಂತೋಷ ಚಾಕುಂಡಿ, ಗಜಾನಂದ ಸಾಳುಂಕೆ, ಸದಾಶಿವ ಯಾಳವಾರ, ವಿಶ್ವನಾಥ ಅವಟಿ, ರಾಜು ನಾಗರಳ್ಳಿ, ಶಿವಾನಂದ ದೇವರಮನಿ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.