ADVERTISEMENT

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:05 IST
Last Updated 16 ಅಕ್ಟೋಬರ್ 2012, 6:05 IST

ವಿಜಾಪುರ: ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೊಡ ಮಾಡುವ ಶುಲ್ಕ ಮರುಪಾವತಿ ಯೋಜನೆಯಲ್ಲಿ ಪ್ರವರ್ಗ `2ಬಿ~ ಯಲ್ಲಿ  ಬರುವ ಮುಸ್ಲಿಂ, ಬೌದ್ಧ, ಶಿಖ್, ಜೈನ, ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ  ಎಂದು ಇಲ್ಲಿಯ ಮಹಿಳಾ ವಿವಿಯ ಸಿಂಡಿಕೇಟ್‌ನ ಮಾಜಿ ಸದಸ್ಯ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ಸದಸ್ಯ ರಫಿ ಭಂಡಾರಿ ಆರೋಪಿಸಿದ್ದಾರೆ.

ಶುಲ್ಕ ಮರುಪಾವತಿ ನೀತಿಯನ್ನು ಸರ್ಕಾರ ಪರಿಷ್ಕರಿಸಿದೆ. ಈ ಸಂದರ್ಭದಲ್ಲಿ ಪ್ರವರ್ಗ 2ಬಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಅಥವಾ ಮರುಪಾವತಿಯನ್ನು ಕೈಬಿಟ್ಟಿದೆ. ತಕ್ಷಣವೇ ಈ ಯೋಜನೆಯಡಿ 2ಬಿ ವರ್ಗವನ್ನು ಸೇರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಈ ನೀತಿಯಿಂದಾಗಿ 2ಬಿ ವರ್ಗದಡಿ ಬರುವ ರಾಜ್ಯದ ಲಕ್ಷಾಂತರ ವಿದ್ಯಾರ್ಥಿ ಗಳಿಗೆ ಆರ್ಥಿಕವಾಗಿ ಹೊರೆಯಾದಂತಾಗಿದೆ. ಪ್ರಾಥ ಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಓದುವವರಿಗೆ ತೀವ್ರ ತೊಂದರೆಯಾಗ ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ಮೊದಲಿನ ನೀತಿಯನ್ವಯ ಪೂರ್ಣ ಶುಲ್ಕ ಕಟ್ಟಿದರೂ, ಬಳಿಕ ಅದು ಮರುಪಾವತಿಯಾಗುತ್ತಿತ್ತು. ಅಲ್ಲದೆ ಶುಲ್ಕ ವಿನಾಯಿತಿಯೂ ಸಿಗುತ್ತಿತ್ತು. ಇದರಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮುಂದುವರಿಸಲು ಅನುಕೂಲವಾಗಿತ್ತು. ಆದರೆ, ಸರ್ಕಾರದ ಹೊಸ ನೀತಿಯನ್ವಯ ಈ ವರ್ಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮುಂದುವರಿಸಲು ಅಡ್ಡಿಯಾಗಿದೆ ಎಂದು ಹೇಳಿದ್ದಾರೆ.

ಅಲ್ಪಸಂಖ್ಯಾತರಿಗಾಗಿಯೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಕಾರ್ಯನಿರ್ವಹಿಸು ತ್ತಿದೆ. ಇದರಿಂದಾಗಿ ಈ ವರ್ಗದಡಿ ಬರುವ ಕ್ರಿಶ್ಚಿ ಯನ್, ಜೈನ, ಬೌದ್ಧ, ಪಾರ್ಸಿ, ಮುಸ್ಲಿಂ ಹಾಗೂ ಸಿಖ್  ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಲಾಗುವು ದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.
 
ಆದರೆ, ಕೇಂದ್ರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪೂರ್ವ ಹಾಗೂ ಮೆಟ್ರಿಕ್ ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯವಿದೆ. ಆದರೆ, ಶುಲ್ಕ ಮರುಪಾವತಿ ಸೌಲಭ್ಯವಿಲ್ಲ. ಆದಾಗ್ಯೂ ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇನ್ನೂ ಶೈಶವಾವಸ್ಥೆಯಲ್ಲಿದೆ. ಆ ಇಲಾಖೆಗೆ ಈ ಯೋಜನೆ ಬರುವವರೆಗೂ ಮೊದಲಿ ನಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯಿಂದಲೇ ಶುಲ್ಕ ಮರುಪಾವತಿ ಸೌಲಭ್ಯ ಮುಂದುವರಿಸಬೇಕು ಎಂದು ಮನವಿ ಮಾಡಿದ್ದಾರೆ.

ಹೊಸ ನೀತಿಯನ್ವಯ ಶುಲ್ಕ ಮರು ಪಾವತಿ ದರಗಳನ್ನು ನಿಗದಿಪಡಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದ್ದು, ಆ ಸಮಿತಿಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ನಿಯುಕ್ತಿಗೊಳಿಸಬೇಕು ಎಂದೂ ಭಂಡಾರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.