ADVERTISEMENT

`ಅಲ್-ಅಮೀನ್‌ನಲ್ಲಿ ಆಧುನಿಕ ಉಪಕರಣ'

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:02 IST
Last Updated 15 ಜೂನ್ 2013, 6:02 IST

ವಿಜಾಪುರ: `ಇಲ್ಲಿಯ ಅಲ್-ಅಮೀನ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ್ಙ 6 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ರಿಯಾಯಿತಿ ದರದಲ್ಲಿ ಸೇವೆ ನೀಡುತ್ತಿದ್ದು, ರೋಗಿಗಳು ಪ್ರಯೋಜನ ಪಡೆಯಬೇಕು' ಎಂದು ಆಸ್ಪತ್ರೆಯ ಡೀನ್ ಡಾ.ಬಿ.ಎಸ್. ಪಾಟೀಲ ಹೇಳಿದರು.

ಅಲ್-ಅಮೀನ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಸಂಸ್ಥೆಯ ಅಧ್ಯಕ್ಷ ಜಿಯಾವುಲ್ಲಾ ಷರೀಫ್ ಅವರು ತಮ್ಮ `ಷರೀಫ್ ಪ್ರತಿಷ್ಠಾನ'ದಿಂದ ಈ ಯಂತ್ರಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಮಲ್ಟಿ ಡೈರೆಕ್ಟರ್ ಸಿ.ಟಿ. ಸ್ಕ್ಯಾನ್-16 ಸ್ಲೈಸ್' ಯಂತ್ರ ವಿಜಾಪುರ ಜಿಲ್ಲೆಯಲ್ಲಿ ಈಗಿರುವ ಎಲ್ಲ ಯಂತ್ರಗಳಿಗಿಂತ ವಿನೂತನ ಮಾದರಿಯದ್ದಾಗಿದೆ. ಈ ನೂತನ ಸಿಟಿ ಸ್ಕ್ಯಾನ್‌ನಲ್ಲಿ ಕೇವಲ 30 ಸೆಕೆಂಡ್‌ಗಳಲ್ಲಿ ಮೆದುಳು, ಒಂಬತ್ತು ನಿಮಿಷಗಳಲ್ಲಿ ಹೊಟ್ಟೆಯ ಪರೀಕ್ಷೆ ನಡೆಸಬಹುದಾಗಿದೆ. ಈ ಯಂತ್ರದಲ್ಲಿ 3-ಡಿ ವ್ಯವಸ್ಥೆ ಇದ್ದು, ಮೂಳೆ  ಮುರಿತ, ಸಂದಿ ನೋವು ಮತ್ತಿತರ ತೊಂದರೆಗಳನ್ನು ಸಮಗ್ರ ಮತ್ತು ಖಚಿತವಾಗಿ ತಿಳಿದುಕೊಳ್ಳಲು ಅನುಕೂಲ' ಎಂದರು.

`ಈ ಎರಡೂ ಯಂತ್ರಗಳ ಸೇವೆಯ ದರ ಇತರೆಡೆಗಿಂತ ಕಡಿಮೆ ನಿಗದಿ ಮಾಡಿದ್ದೇವೆ. ಬಿಪಿಎಲ್ ಕಾರ್ಡ್‌ದಾರರಿಗೆ ಶೇ.25ರಷ್ಟು, ನಮ್ಮ ಕಾಲೇಜಿನ ಸಿಬ್ಬಂದಿ-ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ' ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ವೈದ್ಯಕೀಯ ಅಧೀಕ್ಷಕ ಡಾ.ಸಾಜೀದ್ ಮುಧೋಳ ಹೇಳಿದರು.

`ಅತ್ಯಾಧುನಿಕ ಈ ಸಿಟಿ ಸ್ಕ್ಯಾನ್‌ನಿಂದ ಎಲುವು, ನಾಡಿ, ಸ್ನಾಯುಗಳ ಚಿತ್ರವನ್ನು 3-ಡಿ ಯಲ್ಲಿ ನೋಡಬಹುದು. ಆ ಭಾಗದಲ್ಲಿರುವ ತೊಂದರೆ ಜನಸಾಮಾನ್ಯರಿಗೂ ಸರಳವಾಗಿ ಅರ್ಥ ವಾಗುತ್ತದೆ. ರೋಗ ನಿರ್ಧಾರವನ್ನು ಕಡಿಮೆ ಅವಧಿಯಲ್ಲಿ ಕರಾರುವಕ್ಕಾಗಿ ತಿಳಿದುಕೊಳ್ಳ ಬಹುದು. ಚಿತ್ರವೂ ಗುಣಮಟ್ಟದ್ದಾಗಿರುತ್ತದೆ' ಎಂದು ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಮೇಶ ಮಾನಕಾರೆ ವಿವರಿಸಿದರು.

`ಸಣ್ಣ ಮೆದುಳು ಸೇರಿದಂತೆ ಸೂಕ್ಷ್ಮ ಭಾಗವನ್ನು ಸಿ.ಟಿ. ಸ್ಕ್ಯಾನ್‌ನಲ್ಲಿ ನೋಡಬಹುದು. ಕ್ರೀಡೆಗಳ ಸಂದರ್ಭದಲ್ಲಿ ಆಗುವ ಗಾಯವನ್ನು ಸರಳವಾಗಿ ಗುರುತಿಸಬಹುದು. ಈ ಯಂತ್ರಗಳ ಪ್ರಯೋಜನಗಳ ಬಗ್ಗೆ ಜನತೆಗೆ ಹಾಗೂ ಜಿಲ್ಲೆಯ ವೈದ್ಯರಿಗೆ ಮಾಹಿತಿ ನೀಡಲಾಗುವುದು.

ರೋಗಿ ಗಳನ್ನು ಕರೆತರಲು ಉಚಿತ ಅಂಬ್ಯುಲೆನ್ಸ್ ಸೇವೆ ಕಲ್ಪಿಸಲಾಗಿದೆ' ಎಂದು ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಜಮೀರ್ ಗೋಲೆವಾಲೆ ತಿಳಿಸಿದರು. `ಮಕ್ಕಳ ಮಂದ ಬುದ್ದಿ ಕಾಯಿಲೆ, ಮೂರ್ಚೆ ರೋಗ, ಹುಟ್ಟಿನಿಂದ ಬರುವ ಕಾಯಿಲೆಗಳ ಜೊತೆಗೆ ಡೆಂಗೆ ರೋಗದ ಚಿಕಿತ್ಸೆಯಲ್ಲಿ ಎಂಆರ್‌ಐ-ಸಿಟಿ ಸ್ಕ್ಯಾನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡೆಂಗೆ ಪೀಡಿತ ಮಗುವಿನ ಮೆದುಳಿನಲ್ಲಿಯ ರಕ್ತಸ್ರಾವ ಪತ್ತೆ ಹೆಚ್ಚಿ ಕಿತ್ಸೆ ಕೊಡಬಹುದು' ಎಂದು ಮಕ್ಕಳ ತಜ್ಞ ಡಾ.ಎ.ಎನ್. ಥೊಬ್ಬಿ ಹೇಳಿದರು.

`ಮೂಳೆ ಮುರಿತ, ಬೆನ್ನು ನೋವು ಮತ್ತಿತರ ತೊಂದರೆಗಳನ್ನು ಸರಳವಾಗಿ ಪತ್ತೆ ಹಚ್ಚಿ, ಪರಿಣಾಮಕಾರಿ ಉಪಚಾರ ನೀಡಲು ಇದು ಸಹಕಾರಿ' ಎಂದು ಎಲುವು-ಕೀಲು ತಜ್ಞ ಡಾ.ಎ.ಎಚ್. ಸಾಸನೂರ ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸತೀಶ್ ರಾಶಿನಕರ, ಡಾ.ಅಷ್ಪಾಕ ಅರಕೇರಿ, ಡಾ.ಅತೀಕ್ ಅಹ್ಮದ್, ಡಾ.ದಾದಾಪೀರ, ಡಾ.ಬಿ.ಎಸ್.ಸಣಕಲ್, ಡಾ.ರಾಜೇಂದ್ರಕುಮಾರ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

  ಆಸ್ಪತ್ರೆಯಲ್ಲಿ ಹಲವಾರು ಸೇವೆಗಳು ಲಭ್ಯವಿದ್ದು, ತುರ್ತು ಚಿಕಿತ್ಸೆ ಹಾಗೂ ಅಂಬ್ಯುಲೆನ್ಸ್ ಸೇವೆಗೆ ದೂ.08352- 272564, 270250, 9379035288 ಸಂಪರ್ಕಿಸಬೇಕು ಎಂದು ಡಾ.ಪಾಟೀಲ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.