ADVERTISEMENT

ಆರ್ಥಿಕ ಸಬಲೀಕರಣಕ್ಕೆ ಹೆದ್ದಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 5:30 IST
Last Updated 11 ಜನವರಿ 2012, 5:30 IST

ವಿಜಾಪುರ: `ಮಹಿಳಾ ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವ ಮಹಿಳಾ ತಂತ್ರಜ್ಞಾನ ಪಾರ್ಕ್ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆದ್ದಾರಿ ನಿರ್ಮಿಸಲಿ~ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹೇಳಿದರು.

ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ಜ್ಞಾನಶಕ್ತಿ ಆವರಣದಲ್ಲಿ ಆರಂಭಿಸಿರುವ `ಮಹಿಳಾ ತಂತ್ರಜ್ಞಾನ ಪಾರ್ಕ್~ ಉದ್ಘಾಟಿಸಿ, ನಂತರ `ಮಹಿಳಾ ಕೌಶಲ್ಯ ಅಭಿವೃದ್ಧಿ~ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

`ಮಹಿಳೆಯರನ್ನು ಸಮಾಜದಲ್ಲಿ ಇನ್ನೂ ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಿರುವುದು ನೋವಿನ ಸಂಗತಿ. ಮಹಿಳೆಯರು ಸ್ವಂತ ಬಲದ ಮೇಲೆ ನಿಲ್ಲುವ ಮಾನಸಿಕ ತಯಾರಿ ಮಾಡಲು ಮಹಿಳಾ ತಂತ್ರಜ್ಞಾನ ಪಾರ್ಕ್ ಮೂಲಕ ಪ್ರಯತ್ನಗಳನ್ನು ಮಾಡುತ್ತಿರುವುದು ಅದ್ಭುತ ಕೆಲಸ~ ಎಂದು ಶ್ಲಾಘಿಸಿದರು.

ವಿದ್ಯಾರ್ಥಿನಿಯರು ತಮ್ಮಲ್ಲಿರುವ ಕೀಳರಿಮೆ ತೊರೆದು ಸ್ವಾಭಿಮಾನ, ಅಭಿಮಾನ, ಆತ್ಮಾಭಿಮಾನ, ಆತ್ಮ ವಿಶ್ವಾಸ, ಧೈರ್ಯ ಗಳಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಗೀತಾ ಬಾಲಿ, `ಪುರುಷರಿಗೆ ಸರಿ ಸಮಾನವಾಗಿ ನಿಲ್ಲಲು ಅವಶ್ಯವಿರುವ ಕೌಶಲ್ಯಗಳನ್ನು ಬೆಳೆಸಲು ಮಹಿಳಾ ವಿಶ್ವವಿದ್ಯಾಲಯ ಪಠ್ಯಕ್ರಮ ರೂಪಿಸಿದೆ. ಅದರ ಪ್ರತಿಫಲ ಈಗ ದೊರೆಯುತ್ತಿದೆ. ಹಲವಾರು ಇತಿಮಿತಿಗಳ ಮಧ್ಯೆಯೂ ವಿದ್ಯಾರ್ಥಿನಿಯರಿಗೆ ಮತ್ತು ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ~ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವೇಶ್ವರಯ್ಯ ಅನ್ವಯಿಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಸರ್ವಮಂಗಳ ಪಾಟೀಲ ಅವರು `ಉದ್ಯಮಶೀಲತಾ ಕೌಶಲ್ಯಗಳು~, ಮಹಿಳಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ನಾಟೆಕರ್ `ನಿರ್ವಹಣಾ ಕೌಶಲ್ಯ~ ಹಾಗೂ ಮಹಿಳಾ ವಿವಿ ಆಹಾರ ಸಂಸ್ಕರಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನಿತಾ ಹಂಜೆ `ಆಹಾರ ನಿರ್ವಹಣೆ ಕೌಶಲ್ಯ~ ಕುರಿತು ಉಪನ್ಯಾಸ ನೀಡಿದರು.

ಕುಲಸಚಿವ ಪ್ರೊ.ಜಿ.ಆರ್. ನಾಯಿಕ, ಕುಲಸಚಿವ (ಮೌಲ್ಯಮಾಪನ) ಪ್ರೊ.ಡಿ.ಎಚ್. ತೇಜಾವತಿ, ಸಿಂಡಿಕೇಟ್ ಸದಸ್ಯರಾದ ಎ.ಎ. ಪಾರ್ಸಿ, ಶರಣಬಸಪ್ಪ ಅರಕೇರಿ, ರಫಿ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಡಾ.ಓಂಕಾರ ಕಾಕಡೆ ಪರಿಚಯಿಸಿದರು. ಮಹಿಳಾ ತಂತ್ರಜ್ಞಾನ ಪಾರ್ಕ್‌ನ ನಿರ್ದೇಶಕ ಪ್ರೊ.ಎಸ್.ಎ. ಖಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಎಂ.ಬಿ. ದಿಲ್‌ಷಾದ್ ಕಾರ್ಯಕ್ರಮ ನಿರೂಪಿಸಿದರು. ಟಿ. ಶಾಂತಾದೇವಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.