ADVERTISEMENT

ಆಸರೆ ಮನೆಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 11:00 IST
Last Updated 24 ಜನವರಿ 2012, 11:00 IST

ಆಲಮಟ್ಟಿ: ಹುಣಶ್ಯಾಳ ಪಿ.ಸಿ ಗ್ರಾಮದಲ್ಲಿ 32 ಎಕರೆ ಪ್ರದೇಶದಲ್ಲಿ  ರೂ. 4.55 ಕೋಟಿ ವೆಚ್ಚದಲ್ಲಿ 350 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಸಂತ್ರಸ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಶಾಸಕ ಎಸ್.ಕೆ.ಬೆಳ್ಳುಬ್ಬಿ  ಹೇಳಿದರು.


ಹುಣಶ್ಯಾಳ ಪಿ.ಸಿ. ಗ್ರಾಮದಲ್ಲಿ ನಿರ್ಮಿಸಲಾದ 350 ಮನೆಗಳ ಆಸರೆ ಮನೆಗಳ  ಹಸ್ತಾಂತರ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ  ಈ ಗ್ರಾಮವನ್ನು ಸೇರಿಸಲಾಗಿದೆ.  ಬೋರವೆಲ್ ಮುಖಾಂತರ ನೀರಿನ ವ್ಯವಸ್ಥೆ ಮಾಡಲಾಗಿದೆ.  ಬಾಕಿ ಉಳಿದಿರುವ  6 ಎಕರೆ ಪ್ರದೇಶವನ್ನು ಸ್ಮಶಾನಕ್ಕೆ ಬಳಸಲು ಅವಕಾಶವಿದೆ ಎಂದು ತಿಳಿಸಿದರು.

ಪ್ರವಾಹಕ್ಕೆ ಒಳಗಾಗಿರುವ ಮತಕ್ಷೇತ್ರದ ಹುಣಶ್ಯಾಳ ಪಿ.ಸಿ, ರೋಣಿಹಾಳ, ಡೋಣೂರ, ಚಿಕ್ಕಗರಸಂಗಿ ಗ್ರಾಮಗಳನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಆಸರೆ ಮನೆಗಳ ನಿರ್ಮಾಣ ಮಾಡಲಾಗಿದೆ.  ಈಗಾಗಲೇ ರೋಣಿಹಾಳ ಗ್ರಾಮದಲ್ಲಿ  ಮನೆಗಳನ್ನು ಹಸ್ತಾಂತರ ಮಾಡಲಾಗಿದೆ ಎಂದರು.

ಚಿಕ್ಕಗರಸಂಗಿಯಲ್ಲಿ 101 ಮನೆಗಳ ನಿರ್ಮಾಣದಲ್ಲಿ  ಇನ್ನೂ  ಸ್ವಲ್ಪ ಕಾಮಗಾರಿ ಉಳಿದಿದೆ.  ಅದು ಮುಕ್ತಾಯವಾದ ತಕ್ಷಣವೇ ಆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಮಹಾದೇವ ಮುರಗಿ, ತಾ.ಪಂ. ಅಧಿಕಾರಿ ವಿ.ಎಂ. ಕೋನರೆಡ್ಡಿ, ಜಿ.ಎಸ್.ಪಾಟೀಲ, ಗ್ರಾ.ಪಂ. ಅಧ್ಯಕ್ಷೆ ಬಿರಾದಾರ,  ಎಸ್.ಎಸ್. ತುಮರಮಟ್ಟಿ, ಮುಖಂಡರಾದ ರಾಮು ಲೇಸಪ್ಪಗೋಳ, ಚನ್ನಗೊಂಡಪ್ಪಗೌಡ ಪಾಟೀಲ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ  ಡಾ. ಪದ್ಮಾವತಿ ಗುಡಿ ಮತ್ತಿತರರು ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT