ತಾಳಿಕೋಟೆ: ಪಟ್ಟಣದ ಫ್ರೆಂಡ್ಸ್ ರಿಕ್ರಿಯೆಶನ್ ಕ್ಲಬ್ ಕಾರ್ಯಕರ್ತರು ಸಮುದಾಯ ಆರೋಗ್ಯ ಕೇಂದ್ರವನ್ನು ಸ್ವಚ್ಛಗೊಳಿಸುವ ಮೂಲಕ ಅಲ್ಲಿಯ ಅವ್ಯವಸ್ಥೆ ಸುಧಾರಣೆಗಾಗಿ ಗಾಂಧಿಗಿರಿ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಕೊಳಕು ವಾಸನೆಯಿಂದ ತುಂಬಿದ್ದ ರೋಗಿಗಳ ಕೋಣೆಯನ್ನು ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಿದರು. ಆಸ್ಪತ್ರೆ ಕಿಡಕಿ, ಬಾಗಿಲುಗಳಲ್ಲಿ ತುಂಬಿದ್ದ ಕೊಳೆ, ದೂಳು, ಕಸ ಕಡ್ಡಿ, ಜೇಡವನ್ನು ತೆಗೆದು ಆಸ್ಪತ್ರೆ ವಾತಾವರಣಕ್ಕೆ ಹೊಸ ಮೆರಗು ನೀಡುವ ಪ್ರಯತ್ನ ಮಾಡಿದರು. ಅಲ್ಲದೆ ಹಾಸಿಗೆ ಮೇಲೆ ಹೊಸ ಬೆಡ್ಶೀಟ್ ಹಾಕಿ, ರೋಗಿಗಳಿಗೆ ರೆಕ್ಸಿನ್, ಬ್ಲಾಂಕೆಟ್ ನೀಡಿದರು. ಎಲ್ಲ ಕೋಣೆಗಳಿಗೆ ಸುವಾಸನೆಯ ಔಷಧ ಸಿಂಪಡಿಸಿದರು.
ಕ್ಲಬ್ ಅಧ್ಯಕ್ಷ ಚಿನ್ನು ದಾಯಪುಲೆ, ಉಪಾಧ್ಯಕ್ಷ ಅಪ್ಪು ಪಾಟೀಲ, ಕಾರ್ಯದರ್ಶಿ ಶಿವಾನಂದ ಹೂಗಾರ, ರಸ್ತೆ ಅಪಘಾತದಲ್ಲಿ ಸಿಲುಕಿ ಗಾಯಗೊಂಡಿದ್ದ ಶಾಲಾ ಮಕ್ಕಳನ್ನು ಆಸ್ಪತ್ರೆಗೆ ತಂದಾಗ ಕೊಳಕಾದ, ಒಣಗಿದ ರಕ್ತದ ಕಲೆಗಳಿರುವ ರೆಕ್ಜಿನ್ಮೇಲೆ ಮಕ್ಕಳನ್ನು ಮಲಗಿಸಿದ್ದು ಕಂಡು ಭಯವಾಗಿತ್ತು. ಆಸ್ಪತ್ರೆಯ ಕೊಳಕು ನೋಡಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಲಬ್ನ ಸದಸ್ಯರೆಲ್ಲ ಒಟ್ಟಾಗಿ ಅವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಗಾಂಧಿಗಿರಿ ತತ್ವವನ್ನು ಅನುರಿಸಲಾಗಿದೆ ಎಂದು ಹೇಳಿದರು.
ಸ್ವಚ್ಛತಾ ಕಾರ್ಯದಲ್ಲಿ ಸದಸ್ಯರಾದ ಅಣ್ಣು ಜಗತಾಪ, ವಿಶ್ವನಾಥ ಬಿದರಕುಂದಿ, ಪ್ರಶಾಂತ ಕೊಡಗಾನೂರ, ಅನಿಲ ದೇಸಾಯಿ, ರಾಜು ಹಂಚಾಟೆ, ಸಂಜು ಹಂಚಾಟೆ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ), ಸಂಗನಗೌಡ ಹೇಗರೆಡ್ಡಿ, ಜಿನ್ನಪ್ಪ ಪ್ರಥಮಶೆಟ್ಟಿ, ಸಂತೋಷ ಡಿಸಲೆ, ಓಂಪ್ರಕಾಶ ಡೋಣೂರಮಠ, ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಆರ್.ಎಲ್.ಪವಾರ, ಸಂತೋಷ ಗಾವಡೆ, ವಿರೂಪನಗೌಡ ಪಾಟೀಲ, ರವಿ ಕಲಾಲ, ಚಿನ್ನು ಕೋರವಾರ, ಎಬಿವಿಪಿ ಅಧ್ಯಕ್ಷ ಬಸು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.