ADVERTISEMENT

ಉ.ಕ. ಸೊಗಡಿನ ಕಾರ್ಯಕ್ರಮಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:01 IST
Last Updated 25 ಡಿಸೆಂಬರ್ 2012, 6:01 IST

ವಿಜಾಪುರ: ನಗರದಲ್ಲಿ ಜರುಗಲಿರುವ 79ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಸೊಗಡಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಏರ್ಪಡಿಸಲು ನಿರ್ಧರಿಸಲಾಯಿತು.

ಸೋಮವಾರ ಸಂಜೆ ಇಲ್ಲಿ ನಡೆದ ಸಮ್ಮೇಳನದ ಸಾಂಸ್ಕೃತಿಕ ಸಮಿತಿ ಸಭೆಯಲ್ಲಿ ಶ್ರೀಕೃಷ್ಣ ಪಾರಿಜಾತ, ಬಯಲಾಟ, ಸಣ್ಣಾಟ ಪ್ರಕಾರಗಳು, ಶಂ.ಗು. ಬಿರಾದಾರ ಅವರ ರಚಿಸಿರುವ ಮಕ್ಕಳ ಕವನಗಳ ಸಮೂಹ ಗಾಯನ ಮತ್ತಿತರ ಸಾಹಿತ್ಯ ಪ್ರಕಾರಗಳ ಪ್ರದರ್ಶನಕ್ಕೆ ಹಾಗೂ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಯಿತು.

ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಸಾಹಿತ್ಯದ ಜೊತೆಗೆ ಸಂಗೀತದ ಮೆರಗು ನೀಡಲು ಗುಣಮಟ್ಟದ ಕಾರ್ಯಕ್ರಮ ಸಂಘಟಿಸಬೇಕಾಗಿದೆ ಎಂದರು.

`ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲು ಸಮೂಹ ಗಾಯನದಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ರಾಜ್ಯಮಟ್ಟದ ಕಲಾವಿದರೊಂದಿಗೆ ಸ್ಥಳೀಯ ಹಿರಿಯ ಕಲಾವಿದರು ಹಾಗೂ ಕಿರಿಯ ಕಲಾವಿದರಿಗೆ ಸಮಾನ ಅವಕಾಶ ಕಲ್ಪಿಸಬೇಕು' ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುತ್ತಿ ಜಂಬುನಾಥ್, `ಜಿಲ್ಲೆಯ ಅರಳುತ್ತಿರುವ  ಮತ್ತು ಅರಳುವ ಪ್ರತಿಭೆಗಳಿಗೆ ಅವಕಾಶ ನೀಡಿ ಸಾಹಿತ್ಯಕ್ಕೆ ಪೂರಕವಾದ, ಗುಣಮಟ್ಟಕ್ಕೆ ಆದ್ಯತೆ ನೀಡಿ ಕಾರ್ಯಕ್ರಮ ರೂಪಿಸೋಣ. ಇದಕ್ಕೆ ಕಲಾವಿದರ ಸಹಕಾರ-ಸಲಹೆ ಅಗತ್ಯ' ಎಂದು ಹೇಳಿದರು.

ಸಮ್ಮೇಳನದ ಸಾಂಸ್ಕೃತಿಕ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಗುತ್ತಿ ಜಂಬುನಾಥ್ ಅವರನ್ನು ಆಯ್ಕೆ ಮಾಡಲಾಯಿತು. ಸಾಹಿತ್ಯ ಸಮ್ಮೇಳನದ ಸದಸ್ಯತ್ವ ನೋಂದಣಿ ರಸೀತಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಕಲಾವಿದರಾದ ಲತಾ ಜಹಗೀರದಾರ, ಮಹೇಂದ್ರಕರ, ವಾರ್ತಾಧಿಕಾರಿ ರಂಗನಾಥ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.