ADVERTISEMENT

ಕಬ್ಬಿನ ಬಾಕಿ ಹಣ ಶೀಘ್ರವೇ ಬಿಡುಗಡೆ: ಭೂಸನೂರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:11 IST
Last Updated 17 ಡಿಸೆಂಬರ್ 2012, 6:11 IST

ಆಲಮೇಲ: 2006-07ನೇ ಸಾಲಿನಲ್ಲಿ ಇಂಡಿ ಸಿಂದಗಿ ಭಾಗದ ಸಾವಿರಾರು ರೈತರು ಬೆಳೆದ ಕಬ್ಬು ಕಟಾವು ಆಗದೇ ಹಾನಿಯಾಗಿದ್ದು, ಅದರ ಪರಿಹಾರವನ್ನು ಸರಕಾರ ಅರ್ಧದಷ್ಟನ್ನು ನೀಡಿತ್ತು. ಉಳಿದ ಬಾಕಿ ರೂ. 15 ಕೋಟಿಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದು, ಈ ಬಾಕಿ ಮೊತ್ತವು ಜನವರಿ ಮೊದಲ ವಾರದಲ್ಲಿ ರೈತರ ಕೈ ಸೇರಲಿದೆ ಎಂದು ಶಾಸಕ ರಮೇಶ ಭೂಸನೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಂಡಿ ಶಾಸಕ ಡಾ.ಸಾರ್ವಭೌಮ ಬಗಲಿ, ವಿಠ್ಠಲ ಕಟಕಧೋಂಡ, ಹಾಗೂ ತಾವು ಮಾಡಿಕೊಂಡ ಮನವಿಗೆ ಸಕಾರಾತ್ಮಕ ಸ್ಪಂದಿಸಿದ  ಮುಖ್ಯಮಂತ್ರಿಗಳು ಈ ತಿಂಗಳಾಂತ್ಯಕ್ಕೆ ಹಣ ಕೈ ಸೇರುವಂತೆ ಮಾಡುವು ದಾಗಿ ಸದನದಲ್ಲಿ ಹೇಳಿದ್ದಾರೆ. ರೈತರ ಬಹು ದಿನಗಳ ಬೇಡಿಕೆ ಈಡೇರಿ ಅಂದು ಕಬ್ಬು ಬೆಳೆದು ಕಷ್ಟ ಸೋಸಿದ ರೈತರ ಮೊಗದಲ್ಲಿ ಈಗ ಸಂತಸ ಚಿಮ್ಮಿದೆ ಎಂದರು.

ಬೀದಿಗಿಳಿದು ಹೋರಾಟ
ರೈತರು ಈ ಭಾಗದಲ್ಲಿ ಸಾಕಷ್ಟು ಕಬ್ಬು ಬೆಳೆದಿದ್ದು, ಸೂಕ್ತ ಬೆಲೆಯನ್ನು ಕಾರ್ಖಾನೆಗಳ ಮಾಲೀಕರು ನೀಡುತ್ತಿಲ್ಲ. ಇಲ್ಲಿನ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ, ನಾದ ಬಳಿ ಜಮಖಂಡಿ ಶುಗರ್ಸ,ಪಕ್ಕದ ಅಫ್ಜಲಪುರದ ರೇಣುಕಾ ಸಕ್ಕರೆ ಕಾರ್ಖಾನೆಗಳು ಸೂಕ್ತ ಬೆಲೆಯನ್ನು ನೀಡದೇ ರೈತರನ್ನು ವಂಚಿಸುತ್ತಿದ್ದಾರೆ.

ಮುಧೋಳದ ರನ್ನ ಸಕ್ಕರೆ ಕಾರ್ಖಾನೆಯವರು, ನಿರಾಣಿ ಶುಗರ್ಸ್, ದುಧನಿಯ ಕಾರ್ಖಾನೆಗಳು ಪ್ರಸಕ್ತ ವರ್ಷ ಪ್ರತಿ ಟನ್‌ಗೆ ರೂ. 2500 ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ಈ ಭಾಗದ ಕಾರ್ಖಾನೆಗಳು  ಪ್ರತಿ ಟನ್‌ಗೆ ಕೇವಲ ರೂ. 2200 ರೂಗಳನ್ನು ನೀಡುತ್ತಿವೆ. ಇಲ್ಲಿ ಬೆಳೆದ ರೈತರಿಗೂ ಪಕ್ಕದ ಕಾರ್ಖಾನೆಗಳು ನೀಡುವ ಬೆಲೆಯನ್ನು ನೀಡಬೇಕು.

ಇದಕ್ಕೆ ವಾರದ ಗಡುವು ನೀಡುವುದಾಗಿ ಎಚ್ಚರಿಸಿದ ಶಾಸಕರು. 2500 ಬೆಲೆ ಘೋಷಣೆ ಮಾಡದಿದ್ದರೆ ರೈತರೊಂದಿಗೆ ಆಡಳಿತ ಪಕ್ಷದವನಾಗಿದ್ದರೂ ಕೂಡಾ ಬೃಹತ್ ಪ್ರಮಾಣದಲ್ಲಿ ರೈತರ ಹೋರಾಟ ಮಾಡಬೇಕಾಗುತ್ತದೆ. ಇದನ್ನರಿತು ತಕ್ಷಣವೇ ಸಕ್ಕರೆ ಕಾರ್ಖಾನೆಗಳ ಮಾಲೀಕರು  ಬೆಲೆಯನ್ನು ಘೋಷಣೆ ಮಾಡುವಂತೆ ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿನಾಥ ಜೇರಟಗಿ, ಗಾಲೀಬಸಾಬ್ ತಾಂಬೋಳಿ,ಬಾಬು ಕೋತಂಬರಿ, ಈಶ್ವರ ನಾರಾಯಣಕರ ಮೊದಲಾದ ರೈತ ಮುಖಂಡರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.