ADVERTISEMENT

ಕಾಮಗಾರಿ ಕಳಪೆ: ಸ್ಥಳೀಯರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 4:53 IST
Last Updated 17 ಸೆಪ್ಟೆಂಬರ್ 2013, 4:53 IST

ತಾಳಿಕೋಟೆ: ಪಟ್ಟಣದಲ್ಲಿ ನಡೆಯುತ್ತಿರುವ  ಒಳಚರಂಡಿ (ಯುಜಿಡಿ) ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಸಾರ್ವಜನಿಕರು ಉಸ್ತುವಾರಿ ಎಂಜಿನಿಯರ್‌ ಅವರಿಗೆ ಮುತ್ತಿಗೆ ಹಾಕಿದ ಪ್ರಸಂಗ ಸೋಮವಾರ ನಡೆಯಿತು.

ಪಟ್ಟಣದ 1 ಹಾಗೂ 2ನೇ ವಾರ್ಡ್‌ನಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗಳಲ್ಲಿ  ನಿಯಮಾನುಸಾರ ಬಳಸಬೇಕಾಗಿದ್ದಕ್ಕಿಂತ ದೊಡ್ಡ ಸೈಜಿನ ಜಲ್ಲಿ ಕಲ್ಲುಗಳನ್ನು ಬಳಸಲಾಗುತ್ತಿದೆ.  ಸರಿಯಾದ ಬೆಡ್ ಹಾಕುತ್ತಿಲ್ಲ, ಪ್ರಮಾಣಬದ್ಧ ಸಿಮೆಂಟ್‌ ಬಳಕೆಯಾಗಿಲ್ಲ.

ಸರಿಯಾಗಿ ಕ್ಯೂರಿಂಗ್‌ ಮಾಡುತ್ತಿಲ್ಲ. ಇದರಿಂದಾಗಿ  ಸಾರ್ವಜನಿಕರು ಪ್ರತಿದಿನ ತೊಂದರೆ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯರು ಆರೋಪಿಸಿದರು.

ಕಾಮಗಾರಿ ಕಳಪೆಯಾದರೆ ವಾಹನಗಳು ಸಂಚರಿಸುವ  ಸಮಯದಲ್ಲಿ ರಸ್ತೆ ಕುಸಿಯುವ ಭೀತಿಯೇ ಹೆಚ್ಚು, ಎಂದು ಆಕ್ರೋಶ ವ್ಯಕ್ತಪಡಿಸಿ, ಒಳಚರಂಡಿಯನ್ನು ಒಡೆದು ಕಳಪೆ ಗುಣಮಟ್ಟವನ್ನು ವಿಜಾಪುರ ಉಸ್ತುವಾರಿ ಎಂಜಿನಿಯರ್‌ ಶಿವಾನಂದ ಪಟ್ಟಣಶೆಟ್ಟಿ ತೋರಿಸಿದರು.

ಕಾಮಗಾರಿ ಪರಿಶೀಲಿಸಿದ  ಅವರು  ಕಳಪೆ ಕಾಮಗಾರಿ ಆಗಿರುವುದನ್ನು ಒಪ್ಪಿಕೊಂಡರಲ್ಲದೇ  ಮುಂದೆ ಕಳಪೆ ಕಾಮಗಾರಿಯನ್ನು ಮಾಡಿದರೆ ಇಲಾಖಾ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಾಮಗಾರಿ ಉಸ್ತುವಾರಿ ವಹಿಒಸಿರುವ  ಶ್ರೀ ಶುಭಾ ಸೇಲ್ಸ್ ಕಾಂಟ್ರ್ಯಾಕ್ಟರ್ ಕೆ.ಎ. ನಂದಾ ಅವರಿಗೆ ಎಚ್ಚರಿಕೆ ನೀಡಿದರು.

ಕೆಲಸಗಾರರು ಅಧಿಕಾರಿಗಳು ಹತ್ತಿರವಿಲ್ಲದ್ದನ್ನು ಗಮನಿಸಿ ಆತುರಾತುರವಾಗಿ ಕೆಲಸ ಮುಗಿಸಲು ಯತ್ನಿಸುತ್ತಿದ್ದಾರೆ. ಮನೆಗಳಿಂದ ಶೌಚಾಲಯದ ಹಾಗೂ ಮ್ಯಾನ್‌ಹೋಲ್‌ಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಪೈಪ್‌ಗಳ ಜೋಡಣೆ ಮಾಡದೇ  ಮಣ್ಣು ಮುಚ್ಚುತ್ತಿದ್ದಾರೆ. ಕೆಲವೆಡೆ ಪೈಪ್‌ಗಳ ಗುಣಮಟ್ಟ  ಕಳಪೆಯಾಗಿದೆ. ಎಂದು ಕವೀ ಫೌಂಡೇಶನ್ ಸಂಸ್ಥಾಪಕ ವೀರೇಶ ಕೋರಿ ಇತರರು ದೂರಿದರು.

ಈ ಸಂದರ್ಭದಲ್ಲಿ ರಾಜೇಂದ್ರ ಮಠ,  ಗುರುರಾಜ ಹಿರೇಮಠ, ಮಲ್ಲಪ್ಪ ತಳವಾರ, ರಮೇಶ ತಳವಾರ, ವಿಠ್ಠಲ ಗಾಯಕವಾಡ, ಬಸವರಾಜ ಕೋರಿ, ಶಾಂತಗೌಡ ಮದರಕಲ್ಲ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.