ADVERTISEMENT

ಕಾರಜೋಳ ಏತ ನೀರಾವರಿ ಯೋಜನೆಗೆ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2012, 7:40 IST
Last Updated 11 ಆಗಸ್ಟ್ 2012, 7:40 IST

ವಿಜಾಪುರ: ತಾಲ್ಲೂಕಿನ ಕಾರಜೋಳ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮೂಲತಃ ಕಾರಜೋಳ ಗ್ರಾಮದವರೇ ಆಗಿರುವ ಸಣ್ಣ ನೀರಾವರಿ ಇಲಾಖೆ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

2012-13ನೇ ಸಾಲಿನ ಲೆಕ್ಕಶೀರ್ಷಿಕೆ 4702 ಪ್ರಧಾನ ಕಾಮಗಾರಿಗಳ ಅಡಿಯಲ್ಲಿ ಕಾರಜೋಳ ಏತ ನೀರಾವರಿ ಯೋಜನೆ ಕೈಗೊಳ್ಳಲು ರೂ.84.65ಕೋಟಿ ಅಂದಾಜು ಪತ್ರಿಕೆಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮಿನಲ್ಲಿ 5 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಕಾರಜೋಳ, ದೂಡಿಹಾಳ ಗ್ರಾಮಗಳು ಅತ್ಯಂತ ಎತ್ತರದಲ್ಲಿವೆ. ಮುಳವಾಡ ಏತ ನೀರಾವರಿಯೂ ಸೇರಿದಂತೆ ಈಗ ರೂಪಿಸಿರುವ ಯಾವ ಯೋಜನೆಗಳಿಂದಲೂ ಈ ಗ್ರಾಮಗಳು ನೀರಾವರಿಗೆ ಒಳಪಡುತ್ತಿರಲಿಲ್ಲ. ಅದಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಕಾರಜೋಳ, ದೂಡಿಹಾಳ, ಮುಳವಾಡ ಗ್ರಾಮಗಳ 5 ಸಾವಿರ ಎಕರೆ ಜಮೀನು ನೀರಾವರಿ ಗೊಳಪಡಲಿದೆ ಎಂದರು.

ಕೊಲ್ಹಾರ ಹತ್ತಿರ ಜಾಕ್‌ವೆಲ್ ನಿರ್ಮಿಸಿ ತಲಾ 2750 ಎಚ್‌ಪಿ ಸಾಮ ರ್ಥ್ಯದ ಮೂರು ವಿದ್ಯುತ್ ಪಂಪ್‌ಸೆಟ್ ಅಳವಡಿಸಿ ಕೃಷ್ಣಾ ನದಿಯಿಂದ ನೀರು ಎತ್ತಲಾ ಗುವುದು. 16 ಕಿ.ಮೀ. ಪೈಪ್‌ಲೈನ್ ಮೂಲಕ ನೀರನ್ನು ಕಾರಜೋಳ ಗ್ರಾಮದ ವರೆಗೆ ಲಿಫ್ಟ್ ಮಾಡಲಾಗುವುದು. ಅಲ್ಲಿಂದ ಕಾಲುವೆಗಳನ್ನು ನಿರ್ಮಿಸಿ ಈ ಮೂರೂ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ಸಚಿವ ಕಾರಜೋಳ ವಿವರಿಸಿದ್ದಾರೆ.

ಎಬಿವಿಪಿ ಪ್ರತಿಭಟನೆ: ವಿದ್ಯಾರ್ಥಿಗಳ ರಿಯಾಯತಿ ಬಸ್‌ಪಾಸ್ ದರ ಕಡಿಮೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನವರು ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಸಿದರು.

ಬಸ್‌ಪಾಸ್ ರಿಯಾಯಿತಿ ದರದಲ್ಲಿ ಶೇ.50 ರಷ್ಟು ತಕ್ಷಣ ಕಡಿಮೆ ಗೊಳಿಸಬೇಕು. ಹೆಚ್ಚಿನ ವಿದ್ಯಾರ್ಥಿಗಳು ಬರುವ ಊರುಗಳಿಗೆ ಕಾಲೇಜು ಸಮಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ಓಡಿಸಬೇಕು. ಕಾಲೇಜುಗಳಿಂದ ಬಸ್ ನಿಲ್ದಾಣಕ್ಕೆ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸುವ ಬಿ.ಎಂ.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶರತ್ ಬಿರಾದಾರ, ಬಸವರಾಜ ಹಳ್ಳಿ, ಸಚಿನ್ ಹಿರೆಮಠ, ಆನಂದ ಬಾಗೋಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಾಹನ ಚಾಲಕರ ಹುದ್ದೆ ಅರ್ಜಿ: ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಎರಡು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ-1, ಸಾಮಾನ್ಯ ಅಭ್ಯರ್ಥಿ-1 ಹುದ್ದೆ ಮೀಸಲಿದ್ದು,. 18ರಿಂದ 40 ವರ್ಷ ವಯೋಮಿತಿಯ ಅಭ್ಯರ್ಥಿಯು 7ನೇ ತರಗತಿ ಪಾಸಾಗಿರಬೇಕು. ಲಘುವಾಹನ ಡ್ರೈವಿಂಗ್ ಲೈಸನ್ಸ್ ಮತ್ತು ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿಯನ್ನು ಅಬಕಾರಿ ಉಪ ಆಯುಕ್ತರ ಕಚೇರಿ, ಶಿಕಾರಖಾನೆ ರಸ್ತೆ, ವಿಜಾಪುರ (ದೂ: 08352-254725) ಅವರಿಂದ ಪಡೆದು ಸೆಪ್ಟೆಂಬರ್ 13ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.