ವಿಜಾಪುರ: ಪ್ರತಿಯೊಬ್ಬ ಮಹಿಳೆಯಲ್ಲಿ ಅಪಾರವಾದ ಪ್ರತಿಭೆ, ಶಕ್ತಿ ಮತ್ತು ಸಾಮರ್ಥ್ಯವಿದೆ. ಮಹಿಳೆಯರಲ್ಲಿರುವ ಹಾಗೂ ಮಹಿಳೆಯರ ಬಗ್ಗೆ ಇರುವ ಕೀಳರಿಮೆ ತೊಲಗಬೇಕಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎ.ಆರ್. ಅಳಗವಾಡಿ ಹೇಳಿದರು.
ಇಲ್ಲಿಯ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕೃಷಿ ತಂತ್ರಜ್ಞರ ಸಂಸ್ಥೆ, ಆಹೇರಿ ರಾಷ್ಟ್ರೀಯ ಕ್ರೀಡಾ ಸಂಘದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ `ಮಹಿಳೆಯರಿಗಾಗಿ ಕಾನೂನು ಅರಿವು ಮತ್ತು ಸಬಲೀಕರಣ~ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರಿಗೆ ಆರ್ಥಿಕ, ಸ್ವಾತಂತ್ರ್ಯ ಹಾಗೂ ಸಮಾಜಿಕ ಭದ್ರತೆ ಒದಗಿಸಲು ಸರ್ಕಾರಗಳು ದಿಟ್ಟ ನಿಲುವು ತೆಳಯಬೇಕಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಕಮಲಾಬಾಯಿ ಮಾಯವಂಶಿ, ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದರು.
ಸಿಕ್ಯಾಬ್ ಮಹಿಳಾ ಪದವಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಮೇತ್ರಿ, ಸಮಾಜದಲ್ಲಿ ಸ್ತ್ರೀ - ಪುರುಷರ ಮಧ್ಯ ಇರುವ ಲಿಂಗ ತಾರತಮ್ಯ ತೊಡೆದು ಹಾಕಿ ಸಮಾನತೆಯ ಸ್ವಾತಂತ್ರ್ಯದ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದೇ ಮಹಿಳಾ ಸಬಲೀಕರಣದ ಉದ್ದೇಶವಾಗಿದೆ ಎಂದರು.
ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಸಹಾಯಕ ಪ್ರಧ್ಯಾಪಕಿ ಡಾ.ಎಚ್.ಎಂ. ಹೇಮಲತಾ ಮಾತನಾಡಿ, ಮಹಿಳೆಯರ ಸಶಕ್ತೀಕರಣ ಕೇವಲ ವ್ಯವಹಾರಿಕ ವರ್ಷಾಚಾರಣೆಯಿಂದ ಸಾಧ್ಯವಿಲ್ಲ. ಮೂಲಭೂತವಾಗಿ ಸಮಾಜದಲ್ಲಿ ಮಹಿಳೆ ಮತ್ತು ಪುರುಷನನ್ನು ನೋಡುವ ದೃಷ್ಟಿ ಮಕ್ಕಳಿಂದಲೇ ಬದಲಾಗಬೇಕು ಎಂದರು.
ವಕೀಲ ಎಂ.ಜಿ. ಮಠಪತಿ, ಪುರುಷ ಪ್ರಧಾನ ದೇಶದಲ್ಲಿ ಮಹಿಳೆ ಕಾನೂನಿನ ಚೌಕಟ್ಟಿನಲ್ಲಿ ಹಂತ ಹಂತವಾಗಿ ಸ್ವಾವಲಂಬಿಯಾಗಿ ಹಕ್ಕು ಪಡೆಯುತ್ತಿದ್ದಾರೆ ಎಂದು ಹೇಳಿದರು.
ಜಿ.ಪಂ. ಸದಸ್ಯೆ ಸೌಮ್ಯ ಕಲ್ಲೂರ, ಡಾ.ಉಡಕೇರೆ, ಡಾ.ರಾಜೇಂದ್ರ ಪೊದ್ದಾರ, ಜಿ. ಶ್ರಿನಿವಾಸಲು, ಡಾ.ಎಸ್.ಬಿ. ಜಗ್ಗೆನವರ, ಡಾ.ಸತೀಶ ಪಾಟೀಲ ಡಾ. ಎಸ್.ವೈ. ವಾಲಿ ಇತರರು ವೇದಿಕೆಯಲ್ಲಿದ್ದರು. ಬಂಡೆಪ್ಪ ತೇಲಿ ಸ್ವಾಗತಿಸಿದರು. ಪೂಜಾ ಬಿ. ಕಾರ್ಯಕ್ರಮ ನಿರೂಪಿಸಿದರು. ಶರಣಗೌಡ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.