ADVERTISEMENT

ಕೃಷಿ ಉತ್ಸವದ ಬದಲು ಮಾಹಿತಿ ಆಂದೋಲ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:45 IST
Last Updated 9 ಅಕ್ಟೋಬರ್ 2012, 9:45 IST

ಸಿಂದಗಿ: ಜಿಲ್ಲೆಯಲ್ಲಿ ಬರದ ಹಿನ್ನಲೆ ಕೃಷಿ ಉತ್ಸವ ಬದಲಿಗೆ ಕೃಷಿ ಮಾಹಿತಿ ಆಂದೋಲವಾಗಿ ಸೋಮವಾರ ಇಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ  ಉದ್ಘಾಟನಾ ಸಮಾರಂಭ ಪರಿವರ್ತನೆ ಗೊಂಡಿತು.

`ಇದು ರೈತರ ಕಾರ್ಯಕ್ರಮವಾಗಿದ್ದರಿಂದ ವೇದಿಕೆ ಯಲ್ಲಿರುವ ಯಾರೊಬ್ಬರಿಗೂ ಮಾಲಾರ್ಪಣೆ ಹಾಕಬೇಡಿ ಎಲ್ಲರ ಪರವಾಗಿ ಪ್ರಗತಿಪರ ರೈತ ರಾವುತಪ್ಪ ಖೇಡಗಿ ಅವರಿಗೆ ನಾನೇ ಮಾಲಾರ್ಪಣೆ ಮಾಡುವೆ~ ಎಂದು ಶಾಸಕ ರಮೇಶ ಭೂಸನೂರ ತಿಳಿಸಿದರು.

ರೈತರ ಪರವಾಗಿ ನಾಗರಹಳ್ಳಿ ಗ್ರಾಮದ ನಾನಾಗೌಡ ಪಾಟೀಲ ಮಾತನಾಡಿದ ನಂತರ ಸಭೆ ನಿರೂಪಣಾಕಾರ, ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಸ್ಪಷ್ಟಿಕರಣ ನೀಡುತ್ತಿದ್ದಂತೆ,ಸಭಿಕರ ಸಾಲಿನಿಂದ ಕನ್ನೊಳ್ಳಿ ಗ್ರಾಮ ಸಿದ್ದಣ್ಣ ಚೌಧರಿ ಎಂಬವರು, `ಕೃಷಿ ಅಧಿಕಾರಿಗಳಿಗೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಹಳ್ಳಿಗಳಿಗೆ ಯಾವೊಬ್ಬ ಕೃಷಿ ಅಧಿಕಾರಿ ಇಣಕಿ ಕೂಡ ನೋಡಲ್ಲ~ ಎಂದು ಜೋರು ಧ್ವನಿಯಲ್ಲಿ ಮಾತನಾಡಿದರು. ಅವರನ್ನು ಕೊನೆಗೂ ಸುಮ್ಮನಿರಿಸಲಾಯಿತು.

ಶಾಸಕರ ಅಧ್ಯಕ್ಷೀಯ ಭಾಷಣವಾದ ಮೇಲೂ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿಗೆ ಮಾತನಾಡಲು ಕೇಳಿಕೊಂಡರು.  `ಯಾವ ಸರ್ಕಾರ, ಯಾವುದೇ ರಾಜಕೀಯ ಪಕ್ಷಗಳೂ ರೈತರ ಪರ ಇಲ್ಲ. ರೈತರ ಸಮಾಧಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ~ ಎಂದು ಖಾರವಾಗಿ ಮಾತನಾಡಿದರು. ತಕ್ಷಣವೇ ಶಾಸಕ ಭೂಸನೂರ ಆಕ್ರೋಶದಿಂದ `ರಾಜಕೀಯ ಮಾತನಾಡಬೇಡಿ~ ಎಂದು ಆಕ್ಷೇಪಿಸಿದರು.

ಸಮಾರಂಭ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ಅಂಗಡಿ ಅವರಿಗೆ ಮಾತನಾಡಿ ಎಂದು ಸೌಜನ್ಯ ಕ್ಕಾದರೂ ಯಾರೂ ಕೇಳಲಿಲ್ಲ-ಇವಿಷ್ಟು ಕೃಷಿ ಮಾಹಿತಿ ಆಂದೋಲನದಲ್ಲಿ ಕಂಡು ಬಂದ ಪ್ರಮುಖ ಅಂಶಗಳು.
ಉದ್ಘಾಟನೆ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಎಸ್.ಮಠ  ಮಾತನಾಡಿ, ಹೊಸ ತಂತ್ರಜ್ಞಾನದ ಕೃಷಿಯಿಂದ ವಿಷಪೂರಿತ ಆಹಾರ ಉತ್ಪಾದನೆ. ಹೀಗಾಗಿ ನೈಸರ್ಗಿಕ ಕೃಷಿ ಸಾವಯವ ಕೃಷಿ ಪದ್ಧತಿ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಿದರು.

ತಾಪಂ ಸದಸ್ಯ ಹಳ್ಳೆಪ್ಪಗೌಡ ಚೌಧರಿ ಅನ್ನದಾತನ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲವಾದ್ದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲಿವೆ ಎಂದು ವಿಷಾದಿಸಿದರು.

ಪ್ರಗತಿಪರ ರೈತ ನಾನಾಗೌಡ ಪಾಟೀಲ ಮಾತನಾಡಿ, ಸರ್ಕಾರದ ಕೃಷಿ ಯೋಜನೆಗಳು ಅರ್ಹ ರೈತರಿಗೆ ತಲುಪುತ್ತಿಲ್ಲ ಎಂದು ದೂರಿದರು.

ಶಾಸಕ ರಮೇಶ ಭೂಸನೂರ, ರೈತರ ಹೆಸರಿನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಿದೆ ನಿಜ. ಹಾಗೆಯೇ ಬಿಜೆಪಿ ಸರ್ಕಾರ ನೇಗಿಲಯೋಗಿಗೆ ಉಪಯುಕ್ತ ಯೋಜನೆಗಳನ್ನು ರೂಪಿಸಿದೆ ಎಂದು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ಕೃಷಿ ಸಂಬಂಧಿತ ವಿವಿಧ ಕೈಪಿಡಿಗಳನ್ನು ಬಿಡುಗಡೆಗೊಳಿಸಲಾಯಿತು.

ಕೃಷಿ ವಿಜ್ಞಾನಿಗಳಾದ ಡಾ.ಎಸ್.ವೈ.ವಾಲಿ, ಡಾ.ಎಸ್. ಎಗದ್ದನಕೇರಿ, ಡಾ.ಎಸ್.ಎಸ್.ಕರಭಂಟನಾಳ, ಡಾ.ಎಸ್.ಎಸ್. ನೂಲಿ ಉಪನ್ಯಾಸ ನೀಡಿದರು. 

ಕೃಷಿ ವಸ್ತು ಪ್ರದರ್ಶನದ ವಿವಿಧ ಮಳಿಗೆಗಳನ್ನು ಹಾಕಲಾಗಿತ್ತು. ಆದರೆ ಅವುಗಳನ್ನು ವೀಕ್ಷಿಸಲು ಅಷ್ಟೊಂದು ರೈತರು ಬಂದಿರಲಿಲ್ಲ. ತಾಪಂ ಅಧ್ಯಕ್ಷೆ ಕಲ್ಲವ್ವ ಬುಳ್ಳಾ, ಉಪಾಧ್ಯಕ್ಷ ಸಿದ್ದನಗೌಡ ಹರನಾಳ, ಜಿಪಂ ಸದಸ್ಯರಾದ ಯಲ್ಲಪ್ಪ ಹಾದಿಮನಿ, ಮಲ್ಲಪ್ಪ  ವೇದಿಕೆಯಲ್ಲಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.