ವಿಜಾಪುರ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬೀಸುತ್ತಿರುವ ಕೊರೆಯುವ ಚಳಿ ಗಾಳಿ ಜನತೆಯನ್ನು ನಲಿಗಿಸಿದೆ. ಎರಡು ದಿನ 13ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಕನಿಷ್ಠ ತಾಪಮಾನ ಶುಕ್ರವಾರ 11.8 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಇನ್ನೂ ಕೆಲ ದಿನ ಈ ಚಳಿ ಮುಂದುವರೆಯಲಿದೆ.
ವಿಜಾಪುರ ಉರಿಬಿಸಿಲ ನಾಡು. ಇಲ್ಲಿ ಇರುವುದು `ಬೇಸಿಗೆ~ ಮತ್ತು `ಕಡು ಬೇಸಿಗೆ~ ಎರಡೇ ಕಾಲ ಎಂಬ ಮಾತು ಜನಜನಿತ. ಕಳೆದ ಒಂದೆರಡು ವರ್ಷಗಳಿಂದ ಈ ಮಾತು ಸುಳ್ಳಾಗುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮ ವಿಜಾಪುರ ಜಿಲ್ಲೆಯ ಮೇಲೂ ಉಂಟಾಗುತ್ತಿದೆ. ಅತೀ ಹೆಚ್ಚು ಬಿಸಿಲು-ಅತೀ ಹೆಚ್ಚು ಚಳಿಗೆ ಈ ಜಿಲ್ಲೆಯ ಜನ ಸಾಕ್ಷಿಯಾಗುತ್ತಿದ್ದಾರೆ.
ಈಗಿನ ಚಳಿಯಿಂದ ಹೆಚ್ಚು ನಲಗುತ್ತಿರುವವರು ಶಾಲಾ ಮಕ್ಕಳು. ದಸರಾ-ದೀಪಾವಳಿ ರಜೆಯಲ್ಲಿ ಮಜಾ ಉಡಾಯಿಸಿದ್ದ ಮಕ್ಕಳಿಗೆ ಈಗಷ್ಟೇ ಶಾಲೆಗಳು ಪುನರರಾಂಭಗೊಂಡಿವೆ. ರಜಾ ಅವಧಿಯಲ್ಲಿ ಬೆಳಿಗ್ಗೆ ಬಹು ಹೊತ್ತಿನವರೆಗೆ ಹಾಯಾಗಿ ಮಲಗಿರುತ್ತಿದ್ದ ಮಕ್ಕಳು ಶಾಲೆಗಳ ಸಮಯಕ್ಕೆ ಸರಿಯಾಗಿ ನಸುಕಿನಲ್ಲಿ ಏಳುವುದನ್ನು ಮತ್ತೆ ರೂಢಿಸಿಕೊಳ್ಳುವ ಮೊದಲೇ ಚಳಿ ದಾಳಿ ಇಟ್ಟಿದೆ.
`ನಗರದ ಬಹುತೇಕ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳ ತರಗತಿಗಳು ಬೆಳಿಗಿನ ಅವಧಿಯಲ್ಲಿಯೇ ನಡೆಯುತ್ತಿವೆ. ಮಕ್ಕಳನ್ನು ಹಾಸಿಗೆಯಿಂದ ಎಬ್ಬಿಸುವುದೇ ದೊಡ್ಡ ಪ್ರಯಾಸದ ಕೆಲಸ. ಸುಖನಿದ್ರೆಯಲ್ಲಿರುವ ಮಕ್ಕಳನ್ನು ಎಬ್ಬಿಸಲು ಹರಸಾಹಸ ಮಾಡಬೇಕಾಗುತ್ತದೆ~ ಎನ್ನುತ್ತಾರೆ ಬಹುಪಾಲು ಪಾಲಕರು.
ಅತಿ ಹೆಚ್ಚು ಉಷ್ಣತೆ ಮತ್ತು ಅತಿ ಕಡಿಮೆ ಚಳಿಯ ಪರಿಣಾಮ ಜನತೆಯ ಚರ್ಮ ಸುಕ್ಕುಗಟ್ಟುತ್ತಿದೆ. ಹೀಗಾಗಿ ಬಹುತೇಕರು ಕೋಲ್ಡ್ ಕ್ರೀಮ್, ಲೋಷನ್ಗಳ ಮೊರೆ ಹೋಗುತ್ತಿದ್ದಾರೆ.
`ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಉತ್ತರ ದಿಕ್ಕಿನಿಂದ ತಂಪು ಗಾಳಿ ಬೀಸುತ್ತಿದೆ. ಹೀಗಾಗಿ ನಮ್ಮಲ್ಲಿ ಚಳಿ ಹೆಚ್ಚಾಗಿದೆ. ಇನ್ನು 2-3 ದಿನ ಈ ಚಳಿ ಮುಂದುವರೆಯಲಿದೆ. ತಮಿಳು ನಾಡಿನಲ್ಲಿ ನೀಲಂ ಚಂಡಮಾರುತ ಉಂಟಾದ ಸಂದರ್ಭದಲ್ಲಿಯೂ ನಮ್ಮಲ್ಲಿ ಚಳಿ ಹೆಚ್ಚಿತ್ತು. ವಾಯುಭಾರ ಕುಸಿದರೆ ನಮ್ಮಲ್ಲಿ ಉಷ್ಣತೆ ಕಡಿಮೆಯಾಗುತ್ತದೆಯೇ ಹೊರತು ಮಳೆ ಆಗುವುದಿಲ್ಲ~ ಎಂದು ಇಲ್ಲಿಯ ಹಿಟ್ಟಿನಹಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಡಾ.ಎಚ್. ವೆಂಕಟೇಶ ಹೇಳುತ್ತಾರೆ.
`ಒಂದು ವಾರಗಳ ವರೆಗೆ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇದ್ದರೆ ಜೋಳದ ಬೆಳೆಗೆ ತೊಂದರೆಯನ್ನುಂಟು ಮಾಡುತ್ತದೆ. ಅದನ್ನು ಹೊರತು ಪಡಿಸಿದರೆ ಈ ಹವಾಮಾನ ವೈಪರಿತ್ಯ ಇತರ ಬೆಳೆಗಳ ಮೇಲೆ ಪರಿಣಾಮ ಬೀರದು~ ಎನ್ನುತ್ತಾರೆ ಅವರು.
`2007ರ ನವೆಂಬರ್ ತಿಂಗಳಲ್ಲಿ ಎರಡು ದಿನಗಳ ಕಾಲ 5.4 ಡಿಗ್ರಿ ಸೆಲ್ಸಿಯಸ್ ಹಾಗೂ 2011ರ ಡಿಸೆಂಬರ್ 27ರಂದು 8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಎರಡು ದಿನಳಿಂದ ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ಇದ್ದು, ಶುಕ್ರವಾರ 11.8ರಷ್ಟು ದಾಖಲಾಗಿದೆ. ಈ ವರ್ಷ ದಾಖಲಾದ ಕನಿಷ್ಠ ತಾಪಮಾನ ಇದು~ ಎಂಬುದು ಅವರ ವಿವರಣೆ.
ಜಿಲ್ಲೆಯಲ್ಲಿ ಸತತ ಮೂರು ಹಂಗಾಮಿನಲ್ಲಿ ಭೀಕರ ಬರ. ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ಕೆರೆ-ಕಟ್ಟೆಗಳು ಬರಿದಾಗಿದ್ದವು. ಆಲಮಟ್ಟಿ ಜಲಾಶಯದಲ್ಲಿಯ ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿತ್ತು. ಬೆಳೆ ಒಣಗಿತ್ತು. ಇತ್ತೀಚಿಗೆ ಆದ ಮಳೆಯಿಂದ ಬೆಳೆಗಳು ಜೀವ ಹಿಡಿದುಕೊಂಡಿವೆ. ಆದರೂ, ಜಿಲ್ಲೆಯಲ್ಲಿ ಚಳಿ ಹೆಚ್ಚಿರುವುದು ಜನತೆಗೆ ಅಚ್ಚರಿ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.