ADVERTISEMENT

ಜಿಲ್ಲೆಯ ಸಮಗ್ರ ನೀರಾವರಿಗೆ ಯೋಜನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:34 IST
Last Updated 22 ಅಕ್ಟೋಬರ್ 2017, 7:34 IST

ದೇವರಹಿಪ್ಪರಗಿ: ಜಿಲ್ಲೆಯ ಸಮಗ್ರ ನೀರಾವರಿಗೆ ಬದ್ಧನಾಗಿ, ಸುಮಾರು ₹ 15 ಸಾವಿರ ಕೋಟಿ ಹಣ ಮೀಸಲಾಗಿಟ್ಟಿದ್ದು, ಮುಂದಿನ ಮೂರು ವರ್ಷಗಳಲ್ಲಿ ಭಾರತದ ಹತ್ತು ಶ್ರೀಮಂತ ಜಿಲ್ಲೆಗಳಲ್ಲಿ ವಿಜಯಪುರವೂ ಒಂದಾಗಲಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ತಿಳಿಸಿದರು. ಸಮೀಪದ ಕಡ್ಲೇವಾಡ ಪಿ.ಸಿ.ಎಚ್ ಗ್ರಾಮದ ಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಲ ಸಂಪನ್ಮೂಲ ಸಚಿವನಾದ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಜಿಲ್ಲೆಯ 203 ಕೆರೆ ತುಂಬುವ ಯೋಜನೆ ಸಿದ್ದಪಡಿಸಿದ್ದು, ಈಗಾಗಲೇ ಸುಮಾರು 65 ಕೆರೆ ತುಂಬುವ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಕೆರೆ ತುಂಬುವುದರ ಮೂಲಕ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.

20 ವರ್ಷದಲ್ಲಿ ಆಗುವ ಕೆಲಸವನ್ನು ಕೇವಲ 5 ವರ್ಷದಲ್ಲಿ ಮಾಡಿ ತೋರಿಸಿದ್ದೇವೆ. ಹಿಂದಿನ ಸರ್ಕಾರ ನೀರಾವರಿಗಾಗಿ ಕೇವಲ ₹ 18 ಸಾವಿರ ಕೋಟಿ ಖರ್ಚು ಮಾಡಿತ್ತು. ಆದರೆ ನಮ್ಮ ಸರ್ಕಾರ ಈಗಾಗಲೇ ₹55 ಸಾವಿರ ಕೋಟಿ ಮೀಸಲಾಗಿಟ್ಟು ನೀರಾವರಿ ಯೋಜನೆಗ ಜಾರಿಗೆ ತರಲಾಗುತ್ತಿದೆ. ನವೆಂಬರ್‌ 25 ರಂದು ಮುಖ್ಯಮಂತ್ರಿಗಳು ಬೂದಿಹಾಳ ಪೀರಾಪುರ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು.

ADVERTISEMENT

ಈ ಭಾಗದಲ್ಲಿ ನೀರಿನ ಬರ ತಪ್ಪಲಿದೆ. ನನ್ನ ಅಧಿಕಾರದ ಅವಧಿಯಲ್ಲಿ ನೀರಾವರಿ ವಿಷಯದಲ್ಲಿ ದಾಖಲೆ ಮಾಡಲಾಗಿದೆ. ಈ ಕುರಿತು ಸಿದ್ಧೇಶ್ವರ ಶ್ರೀಗಳು, ಜಲತಜ್ಞರು, ಹಾರೈಸಿದ್ದಾರೆ. ಇದನ್ನು ಸಹಿಸದ ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತ ಹೋರಾಟ ಮಾಡಲು ವಿಜಯಪುರಕ್ಕೆ ಬರುತ್ತಿರುವುದು ಹಾಸ್ಯಾಸ್ಪದವಾಗಿದೆ. ಇವರು ಪ್ರತಿಭಟನೆ ನಡೆಸಲಿ, 24 ರಂದು ಪತ್ರಿಕೆಗಳಲ್ಲಿ ನಾವೇನು ಮಾಡಿದ್ದೇವೆ ಎಂದು ಉತ್ತರ ನೀಡುತ್ತೇವೆ ಗಮನಿಸಲಿ ಎಂದು ಹರಿಹಾಯ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗನಗೌಡ ಪಾಟೀಲ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ಎಬಿಡಿ ಪೌಂಡೇಶನ್ ಮುಖ್ಯಸ್ಥ ಆನಂದಗೌಡ ದೊಡ್ಡಮನಿ, ಸಾರ್ವಜನಿಕ ಸಂಪರ್ಕಧಿಕಾರಿ ಡಾ.ಮಹಾಂತೇಶ ಬಿರಾದಾರ, ಕಡ್ಲೇವಾಡ ಕೆರೆ ತುಂಬುವ ಹೋರಾಟ ಸಮಿತಿ ಅಧ್ಯಕ್ಷ ಸಾಯಿಕುಮಾರ ಬಿಸನಾಳ, ವಿಠ್ಠಲ ಕೊಳ್ಳೂರ, ಚನ್ನು ವಾರದ, ಸಿದ್ರಾಮಪ್ಪಗೌಡ ಅಸ್ಕಿ, ಮುಸ್ತಾಕ ಮುಲ್ಲಾ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಸಿದ್ದನಗೌಡ ಬಿರಾದಾರ, ಸುರೇಶಗೌಡ ಬಿರಾದಾರ, ಸಂಗಮೇಶ ಛಾಯಾಗೋಳ, ಕಾಂತಪ್ಪ ಕೋರಿ, ಶಬ್ಬೀರ ಮುಲ್ಲಾ,ದಾದಾ ತಾಂಬೋಳಿ,ವಿಠ್ಠಲ ಕನ್ನೊಳ್ಳಿ, ವಿಠ್ಠಲ ದೆಗಿನಾಳ, ಸಿ.ಬಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.