ADVERTISEMENT

‘ಜೀವಕ್ಕೆ ಅಪಾಯವಾದರೆ ನಡಹಳ್ಳಿ, ನಾಡಗೌಡ ಹೊಣೆ’

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 8:34 IST
Last Updated 27 ಫೆಬ್ರುವರಿ 2018, 8:34 IST

ತಾಳಿಕೋಟೆ: ‘ಶಾಸಕರಾದ ಸಿ.ಎಸ್.ನಾಡಗೌಡ (ಅಪ್ಪಾಜಿ), ಎ.ಎಸ್.ಪಾಟೀಲ ನಡಹಳ್ಳಿ ಅವರ ವಿರುದ್ದ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರಿಂದ ಇಬ್ಬರು ಶಾಸಕರು ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ತಮ್ಮ ಜೀವಕ್ಕೆ ಅಪಾಯವಾದರೆ ಅವರೆ ಹೊಣೆಗಾರರು’ ಎಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ವಾಲಿ ಹೇಳಿದರು.

ಇಬ್ಬರು ಶಾಸಕರ ವೈಫಲ್ಯ, ಗುಂಡಾಗಿರಿ, ನಂಬಿಕೆ ದ್ರೋಹ ಮತಕ್ಷೇತ್ರದ ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಜನಜಾಗೃತಿ ಹಮ್ಮಿಕೊಂಡಿದ್ದೇನೆ ಎಂದು ಇಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಿ.ಎಸ್.ನಾಡಗೌಡರು 25 ವರ್ಷಗಳ ಕಾಲ ಸತತವಾಗಿ ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಸರ್ಕಾರಿ ಶಾಲೆಗಳಿಗೆ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಇಲ್ಲ. ಅಂಬೇಡ್ಕರ, ಆಶ್ರಯ ಮನೆಗಳಲ್ಲಿ ಬಾರಿ ಪ್ರಮಾಣದಲ್ಲಿ ಬ್ರಷ್ಟಾಚಾರ ನಡೆದಿದೆ. ಮತಕ್ಷೇತ್ರದ ಜನರನ್ನು ಬಯದಲ್ಲೆ ಜೀವನ ಸಾಗಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

’ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಎಳ್ಳಷ್ಟು ಅಭಿವೃದ್ಧಿ ಮಾಡದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಲ್ಲಿನ ಮತದಾರರನ್ನು ವಂಚಿಸಿ ಮುದ್ದೇಬಿಹಾಳಕ್ಕೆ ವಲಸೆ ಬಂದಿದ್ದಾರೆ. ಸ್ವಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸದವರು ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಬೊಬ್ಬೆ ಹಾಕುತ್ತಾರೆ. ಸೋಲುವ ಭಯದಿಂದ ಮುದ್ದೇಬಿಹಾಳಕ್ಕೆ ಮತಕ್ಷೇತ್ರಕ್ಕೆ ಬಂದಿದ್ದಾರೆ’ ಎಂದರು. ಮಾಳಿಂಗರಾಯ ಹೊನಹಳ್ಳಿ, ಬಸವರಾಜ ಧನ್ನೂರ, ಮಲ್ಲಿಕಾರ್ಜುನ ಲಿಂಗದಳ್ಳಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.