ADVERTISEMENT

ಜೀವನವನ್ನೇ ಬದಲಿಸಿದ ವೇಗಗಳು

​ಪ್ರಜಾವಾಣಿ ವಾರ್ತೆ
Published 8 ಮೇ 2012, 8:15 IST
Last Updated 8 ಮೇ 2012, 8:15 IST

ವಿಜಾಪುರ: `ಬೆಳಕಿನ ವೇಗ, ಶಬ್ದದ ವೇಗ ಹಾಗೂ ಮಾಹಿತಿ ಪರಿವರ್ತನೆಯ ವೇಗಗಳು ಆಧುನಿಕ ಜೀವನದ ಗತಿಯನ್ನೇ ಬದಲಿಸಿವೆ~ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ.ಎಚ್.ಪಿ. ಖಿಂಚಾ ಹೇಳಿದರು.

ಸೋಮವಾರ ಸಂಜೆ ನಡೆದ ಇಲ್ಲಿಯ ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ ದಶಮಾನೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸಮಯ ಎನ್ನುವುದು ಒಂದು ನಿರ್ದಿಷ್ಟ ಸಂಪನ್ಮೂಲ. ಅದು ನಮ್ಮ ಶರೀರ, ಭಾವನೆಗಳು ಹಾಗೂ ಚೇತನವನ್ನು ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಲು ಪ್ರೇರೇಪಿಸಬೇಕು ಎಂದರು.

ಶಿಕ್ಷಣದ ನಾಲ್ಕು ಪ್ರಮುಖ ಸ್ಥಂಭಗಳೆಂದರೆ ಕಲಿಕೆ, ಸ್ವತಃ ಮಾಡುವುದು, ಬದುಕಿನ ಕೌಶಲಗಳನ್ನು ಕಲಿಯುವುದು ಹಾಗೂ ತನ್ನತನವನ್ನು ಬೆಳೆಸಿಕೊಳ್ಳುವುದು. ಈ ನಾಲ್ಕು ಅಂಶಗಳನ್ನು ಮೈಗೂಡಿಸಿಕೊಂಡರೆ ಮಾತ್ರ ನಾವು ಪರಿಪೂರ್ಣ ಶಿಕ್ಷಣ ಪಡೆದಂತೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಸ್.ಎ. ಪುಣೇಕರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಆಡಳಿತ ಮಂಡಳಿ ಸದಸ್ಯ ನಜೀಬ್ ಬಕ್ಷಿ, ಪ್ರಾಚಾರ್ಯ ಡಾ.ಜಮೀಲ್ ದಾವೂದ್, ಪ್ರತಿಭಾವಂತ ವಿದ್ಯಾರ್ಥಿ ನಾಗರಾಜ ಪಟ್ಟಣಶೆಟ್ಟಿ, ಪ್ರೊ.ಆಸೀಫ್ ಮೋಮಿನ, ಪ್ರೊ.ಸಲಾವುದ್ದೀನ್ ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.