ADVERTISEMENT

ಜೀವ ಭಯದಲ್ಲಿಯೇ ಜನರ ಸಂಚಾರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 9:38 IST
Last Updated 24 ಅಕ್ಟೋಬರ್ 2017, 9:38 IST
ತಾಳಿಕೋಟೆಯಿಂದ ಹಡಗಿನಾಳಕ್ಕೆ ಹೋಗುವ ಮಾರ್ಗ ಮಧ್ಯ ಡೋಣಿ ನದಿಗೆ ನಿರ್ಮಿಸಿರುವ ನೆಲಮಟ್ಟದ ಸೇತುವೆ ಮಧ್ಯಭಾಗದ ರಸ್ತೆ ಕಿತ್ತು ಹೋಗಿರುವುದರಿಂದ ದಾಟಲು ಜನರು ಪರದಾಡುತ್ತಿದ್ದಾರೆ
ತಾಳಿಕೋಟೆಯಿಂದ ಹಡಗಿನಾಳಕ್ಕೆ ಹೋಗುವ ಮಾರ್ಗ ಮಧ್ಯ ಡೋಣಿ ನದಿಗೆ ನಿರ್ಮಿಸಿರುವ ನೆಲಮಟ್ಟದ ಸೇತುವೆ ಮಧ್ಯಭಾಗದ ರಸ್ತೆ ಕಿತ್ತು ಹೋಗಿರುವುದರಿಂದ ದಾಟಲು ಜನರು ಪರದಾಡುತ್ತಿದ್ದಾರೆ   

ತಾಳಿಕೋಟೆ: ಪಟ್ಟಣದಿಂದ ಹಡಗಿನಾಳ ಮಾರ್ಗ ಮಧ್ಯದ ಡೋಣಿ ನದಿಗೆ ನಿರ್ಮಿಸಿರುವ ನೆಲಮಟ್ಟದ ಸೇತುವೆ, ಪ್ರವಾಹದ ನೀರಿನ ರಭಸಕ್ಕೆ ಕಿತ್ತು ಹೋದ ಪರಿಣಾಮ ಜನರು ಜೀವ ಭಯದಲ್ಲಿಯೇ ಸಂಚಾರ ನಡೆಸಿದ್ದಾರೆ.

ಡೋಣಿ ನದಿಪಾತ್ರದಲ್ಲಿ ಜೋರು ಮಳೆ ಸುರಿದಾಗಲೆಲ್ಲ ನೆಲಮಟ್ಟದ ಸೇತುವೆ ಭರ್ತಿಯಾಗಿ ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯ. ಈ ಬಾರಿ ಪ್ರವಾಹದಿಂದ ಸೇತುವೆ ಮೇಲ್ಭಾಗದ ರಸ್ತೆ ಕಿತ್ತು ಹೋಗಿದ್ದರಿಂದ ಮಧ್ಯ ಭಾಗದಲ್ಲಿ ಸುಮಾರು ಒಂದು ಅಡಿ ಆಳ, 15 ಅಡಿ ಅಗಲದ ಬೃಹತ್‌ ಗುಂಡಿ ಬಿದ್ದಿದೆ. ಇದರಿಂದ ನಿತ್ಯ ಈ ಸೇತುವೆ ಮೇಲೆ ಸಂಚರಿಸುವ ಜನರು ದೇವರ ಮೇಲೆ ಬಾರ ಹಾಕಿ, ಜೀವ ಕೈಲ್ಲಿ ಹಿಡಿದು ಸಂಚರಿಸುವುದು ಅನಿವಾರ್ಯವಾಗಿದೆ.

ಪಟ್ಟಣದಿಂದ ಮುದ್ದೇಬಿಹಾಳ, ಬಾಗಲಕೋಟೆ, ನಾಲತವಾಡ ಸೇರಿದಂತೆ ನೂರಾರು ಗ್ರಾಮ–ಪಟ್ಟಣಗಳಿಗೆ ತೆರಳಲು ಈ ಹಿಂದೆ ಮಿಣಜಗಿ ಮಾರ್ಗ ಬಳಸಲಾಗುತ್ತಿತ್ತು. ಆದರೆ, ಬಸನಗೌಡ ಪಾಟೀಲ ಯತ್ನಾಳ ಸಂಸದರಾಗಿದ್ದ ವೇಳೆ ಇಲ್ಲಿನ ಜನರ ಕಷ್ಟ ನೋಡಲಾಗದೇ ₹ 20 ಲಕ್ಷ ವೆಚ್ಚದಲ್ಲಿ ಡೋಣಿ ನದಿಗೆ ಅಡ್ಡಲಾಗಿ ನೆಲಮಟ್ಟದ ಸೇತುವೆ ನಿರ್ಮಿಸಿದ್ದರು. ನಂತರ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಮೂಕಿಹಾಳದಿಂದ ಹಡಗಿನಾಳಕ್ಕೆ ರಸ್ತೆ ನಿರ್ಮಾಣ ಕೈಗೊಳ್ಳಲಾಯಿತು.

ADVERTISEMENT

ಇದರಿಂದ ಮಿಣಜಗಿ ಮಾರ್ಗವಾಗಿ ಸಂಚರಿಸುತ್ತಿದ್ದ ಶೇ 90 ರಷ್ಟು ವಾಹನಗಳು 5 ಕಿ.ಮೀ ದೂರದ ಉಳಿತಾಯದ ಹಿನ್ನೆಲೆಯಲ್ಲಿ ಹಡಗಿನಾಳ ಮಾರ್ಗವನ್ನೇ ಬಳಸತೊಡಗಿದವು. ವಾಹನಗಳ ದಟ್ಟಣೆಯಿಂದ ಡಾಂಬರು ರಸ್ತೆ ಕೆಲವೇ ತಿಂಗಳಲ್ಲಿ ಹಾಳಾಗಿ ಹೋಯಿತು. ಮಧ್ಯೆ ತೇಪೆ ಮಾಡಿದರೂ ಕೂಡ ರಸ್ತೆಯ ಆಳ ಮುಚ್ಚಲಾಗಿಲ್ಲ. ಇದೆಲ್ಲರ ಪರಿಣಾಮವಾಗಿ ಸದ್ಯ ಈ ಭಾಗದ ಜನರು ಜೀವಭಯದಲ್ಲಿಯೇ ಸಂಚಾರ ನಡೆಸುವಂತಾಗಿದೆ ಎಂದು ಶಶಿಧರ ಡಿಸಲೆ ಹಾಗೂ ವಿಶ್ವನಾಥ ಬಬಲೇಶ್ವರ ಹೇಳಿದರು

ಡೋಣಿ ನದಿ ಸೇತುವೆ ದುರಸ್ತಿಗೆಂದು ಕೆಆರ್‌ಡಿಸಿಎಲ್‌ ನಲ್ಲಿ 2016–17ರಲ್ಲಿ ₹ 17.93 ಕೋಟಿ ವೆಚ್ಚದಲ್ಲಿ 12 ಮೀ ಅಗಲ, 147.6ಮೀ ಉದ್ದದ ದೊಡ್ಡ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಯೋಜನೆ ಸಿದ್ಧಪಡಿಸಿ ಟೆಂಟರ್ ಸಹಿತ ಕರೆಯಲಾಗಿದೆ. ಆದಷ್ಟು ಶೀಘ್ರದಲ್ಲಿ ದೊಡ್ಡ ಸೇತುವೆ ನಿರ್ಮಿಸಿ ಜನರು ಅನುಭವಿಸುತ್ತಿರುವ ಸಮಸ್ಯೆಗೆ ಕಂಡುಕೊಳ್ಳಲಾಗುವುದು ಎಂದು ಶಾಸಕ ಸಿ.ಎಸ್‌.ನಾಡಗೌಡ ಪ್ರಜಾವಾಣಿಗೆ ತಿಳಿಸಿದರು.

ಈಚೆಗೆ ಡೋಣಿ ನದಿ ಪ್ರವಾಹ ಪರಿಶೀಲನೆಗೆ ಬಂದಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಕೂಡ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಹಾಯ್ದು ಮೂಕಿಹಾಳ ಮುಟ್ಟಬೇಕೆಂದರೆ ಹರಸಹಾಸಪಟ್ಟರು. ರಸ್ತೆ ನಿಜರೂಪ ಕಂಡಿರುವ ಜಿಲ್ಲಾಧಿಕಾರಿ ದೊಡ್ಡ ಸೇತುವೆ ನಿರ್ಮಿಸುವವರೆಗೂ ನೆಮ್ಮದಿಯ ಸಂಚಾರಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ಭರವಸೆಯಲ್ಲಿ ಈ ಭಾಗದ ಜನರಿದ್ದಾರೆ.

ಶರಣಬಸಪ್ಪ ಶಿ ಗಡೇದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.