ADVERTISEMENT

ಡೊನೇಷನ್ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 5:35 IST
Last Updated 1 ಜೂನ್ 2011, 5:35 IST

ವಿಜಾಪುರ: ಜಿಲ್ಲೆಯಲ್ಲಿ ಹೆಚ್ಚಿರುವ ಡೊನೇಷನ್ ಹಾವಳಿಯನ್ನು ತಡೆಗಟ್ಟಲು ಆಗ್ರಹಿಸಿ ಮಂಗಳವಾರ ಎ.ಐ.ಡಿ.ಎಸ್.ಓ ಮತ್ತು ಎ.ಐ.ಡಿ.ವೈ.ಓ ಜಿಲ್ಲಾ ಸಮಿತಿಗಳ ನೇತತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಡೊನೇಷನ್ ತೆಗೆದುಕೊಳ್ಳುತ್ತಿರುವ ಶಾಲಾ-ಕಾಲೇಜುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸ ಲಾಯಿತು.

ಎ.ಐ.ಡಿ.ಎಸ್.ಓ.ನ ಜಿಲ್ಲಾ ಕಾರ್ಯದರ್ಶಿ ಸದಾನಂದ ಬಿರಾದಾರ ಮಾತನಾಡಿ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ನಗರದ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳು ಸೇರಿದಂತೆ ಎಲ್ಲ ಖಾಸಗಿ ಶಾಲಾ ಕಾಲೇಜುಗಳಲ್ಲೂ  ರೂ.10 ಸಾವಿರದಿಂದ 30 ಸಾವಿರವರೆಗೆ ಡೊನೇಷನ್ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ  ಪ್ರವೇಶ ಸಿಗದಂತಾಗಿದೆ. ಆದ್ದರಿಂದ ಜಿಲ್ಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆಗಳು ಇಂತಹ ಕಾಲೇಜುಗಳ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಎ.ಐ.ಡಿ.ವೈ.ಓ ನ ಜಿಲ್ಲಾಧ್ಯಕ್ಷ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ ನಗರದ ಎಲ್ಲ ಕಾಲೇಜುಗಳಲ್ಲಿ ರಾಜಾ ರೋಷವಾಗಿ ನಡೆಯುತ್ತಿರುವ ಡೊನೇಷನ್ ಹಾವಳಿಗೆ ಪ್ರತಿವರ್ಷ ಕೇವಲ ಹೇಳಿಕೆ ಕೊಟ್ಟು ಕುಳಿತು ಕೊಳ್ಳುವ ಜಿಲ್ಲಾ ಆಡಳಿತ ಹಾಗೂ ಶಿಕ್ಷಣ ಇಲಾಖೆ ಕಾರಣ ಎಂದು ಖಂಡಿಸಿದರು.

ಡೊನೇಷನ್ ತೆಗೆದುಕೊಳ್ಳುತ್ತಿರುವ ಕಾಲೇಜುಗಳ ಅನುಮತಿ ರದ್ದು ಮಾಡಿ ಸರಕಾರವೇ ವಿಜ್ಞಾನ ವಿಭಾಗವನ್ನು ಒಳಗೊಂಡಿರುವ ಹೊಸ ಕಾಲೇಜು ಸ್ಥಾಪಿಸಿ ಡೊನೇಷನ್ ಹಾವಳಿಯನ್ನು ತಡೆಗಟ್ಟಬೇಕೆಂದು ಹೇಳಿದರು.

ಪ್ರತಿ ಕಾಲೇಜಿನ ಪ್ರವೇಶಾತಿ ಪ್ರಕ್ರಿಯೆ ಯಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಗೆ ಸರಕಾರದಿಂದ ನಿಗದಿಯಾಗಿರುವ ಶುಲ್ಕವನ್ನು ನೋಟಿಸ್ ಬೋರ್ಡಿನ್ ಮೇಲೆ ಅಂಟಿಸಿರಬೇಕು. ಪ್ರವೇಶ ನೀಡಿರುವ  ವಿದ್ಯಾರ್ಥಿಗಳ ಮೆರಿಟ್ ಒಳಗೊಂಡ ಪಟ್ಟಿಯನ್ನು ಪ್ರದರ್ಶಿಸ ಬೇಕು. ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿಯನ್ನು ಹಚ್ಚಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗುರುರಾಜ, ಉಮೇಶ ಬಿ.ಆರ್. ಪ್ರೀಯಾಂಕ, ವಿನಂತಿ, ನಾಜಮೀನ್, ಚೇತನ, ಆಕಾಶ, ಭೀಮು, ಕುಮಾರ, ಸಂತೋಷ, ಆನಂದ, ಪ್ರವೀಣ, ಎ.ಐ.ಡಿ.ಎಸ್.ಓ ನ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಖ್ಯಾದಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.