ADVERTISEMENT

ತರಬೇತಿ ಇಲ್ಲದ ಶಿಕ್ಷಕರಿಂದ ನರ್ಸರಿ ಬೋಧನೆ: ಕಳವಳ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:00 IST
Last Updated 17 ಫೆಬ್ರುವರಿ 2011, 10:00 IST

ಸಿಂದಗಿ: ‘ಇಂದಿನ ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಪಾಠ ಮಾಡುವ ಬಹುತೇಕ ಶಿಕ್ಷಕರು ತರಬೇತಿಯನ್ನೇ ಹೊಂದಿಲ್ಲ; ಅಂತವರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನಮ್ಮ ಎಳೆಯ ಪುಟಾಣಿಗಳಿಗೆ ಸಿಗುತ್ತಿಲ್ಲ’ ಎಂದು ಶಿಕ್ಷಣತಜ್ಞ ಎನ್.ಜಿ. ಕರೂರ ವಿಷಾದಿಸಿದರು.

ಅವರು ಪಟ್ಟಣದಲ್ಲಿ ನಡೆಯುತ್ತಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿ “ಪ್ರಸ್ತುತ”ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.‘ಇಂದಿನ ಪದವಿ ಶಿಕ್ಷಣ ಹಂತದಲ್ಲಿ  ಇಂಗ್ಲಿಷ್ ಕಲಿಕೆಯ ಅಗತ್ಯತೆ ಕಂಡು ಬರುತ್ತಿದೆ. ಪಠ್ಯಗಳು ಇಂಗ್ಲಿಷ್‌ನಲ್ಲಿರುವುದರಿಂದ ನಮ್ಮ ಕನ್ನಡ ಮಕ್ಕಳು ಉತ್ತಮ ಶಿಕ್ಷಣ ಪಡೆಯುವಲ್ಲಿ ಹಿಂದುಳಿಯುತ್ತಿದ್ದಾರೆ. ಪೂರಕವಾಗಿ ಆರಂಭದಲ್ಲಿಯೇ ಇಂಗ್ಲಿಷ್ ಕಲಿಕೆ ಇದ್ದರೆ ಪದವಿ ಹಾಗೂ ನಂತರದ ಹಂತಗಳ ಶಿಕ್ಷಣ ಸರಳೀಕರಣವಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.

ನಕಲಿ ಡಿಇಡಿ ಹಾಗೂ ಬಿ.ಇಡಿ ಕಾಲೇಜುಗಳಿಂದ ನಕಲಿ ಶಿಕ್ಷಕರು ಹುಟ್ಟಿಕೊಳ್ಳುತ್ತಿರುವುದು ಶಿಕ್ಷಣದ ದುರಂತ ಎಂದರು.ಮಕ್ಕಳ ಹಕ್ಕುಗಳು ಕುರಿತು ಪ್ರೊ.ಚಂದ್ರಗೌಡ ಕುಲಕರ್ಣಿ ಮಾತನಾಡಿ, ಮಕ್ಕಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕಾಗಿದೆ ಎಂದು ಪ್ರತಿಪಾದಿಸಿ ಸಮಕಾಲೀನ ಸಂಗತಿಗಳಿಗೆ ತಕ್ಕಂತೆ ಮಕ್ಕಳನ್ನು ಬೆಳೆಸಬೇಕಾಗಿದೆ ಎಂದರು.ಮಗುವಿನ ಹಕ್ಕುಗಳನ್ನು ಕಸಿಯುವ ಪ್ರಯತ್ನ ಪಾಲಕರು, ಶಿಕ್ಷಕರು ಮಾಡಕೂಡದು ಎಂದು ಹೇಳಿದರು.

ಇನ್ನೊಬ್ಬ ಉಪನ್ಯಾಸಕ ಡಾ.ವಿ.ಎಂ. ಬಾಗಾಯತ ಐತಿಹಾಸಿಕ ಪ್ರಜ್ಞೆ ಮತ್ತು ಯುವ ಜನಾಂಗ ವಿಷಯದಲ್ಲಿ ಮಾತನಾಡಿ, ಯುವ ಜನಾಂಗಕ್ಕೆ ಐತಿಹಾಸಿಕ ಪ್ರಜ್ಞೆ ಅಗತ್ಯವಿದೆ. ಸಾಮಾನ್ಯನು ಇತಿಹಾಸದ ವಸ್ತುವಾಗಬಲ್ಲ. ಕೆಲವು ತಪ್ಪುಗಳು ಇತಿಹಾಸದಲ್ಲಿ ಘಟಿಸುತ್ತವೆ. ಎಚ್ಚರಿಕೆಯಿಂದ ಯುವ ಜನಾಂಗ ಇತಿಹಾಸ ಅರಿಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಗೋಷ್ಠಿಯನ್ನು ಉದ್ಘಾಟಿಸಿದರು.ಸಿ.ಎಂ. ನುಚ್ಚಿ ಸ್ವಾಗತಿಸಿದರು. ಎಂ.ಎನ್. ಕಿರಣ್‌ರಾಜ್ ವಂದಿಸಿದರು. ಬಸವರಾಜಸ್ವಾಮಿ ಮೇಲುಪ್ಪರಿಗೆಮಠ,  ಬಸವರಾಜ ನಾಲತವಾಡ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.